Breaking News
Home / ರಾಜಕೀಯ / ಕನ್ನಡಿಗರ ಮನೆ-ಮನಗಳಲ್ಲಿ ರಾಜ್ ಎಂದಿಗೂ ಅಮರ.

ಕನ್ನಡಿಗರ ಮನೆ-ಮನಗಳಲ್ಲಿ ರಾಜ್ ಎಂದಿಗೂ ಅಮರ.

Spread the love

ಡಾ.ರಾಜ್ (Dr. Raj) , ಕನ್ನಡಿಗರ ಎದೆಬಡಿತದ ಸದ್ದು, ಕನ್ನಡಿಗರ ಉಸಿರು, ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಜ್ಯದ ಅಧಿಪತಿ. ರಾಜ್ ಕುಮಾರ್ (Rajkumar) ಅಂದ್ರೆ ಬರೀ ಹೆಸರಲ್ಲ, ಅದೊಂದು ಶಕ್ತಿ, ಅದು ಕನ್ನಡದ ಪ್ರತಿಧ್ವನಿ, ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, ಹೆಮ್ಮೆಯ ಕನ್ನಡಿಗ, ಇಂದು ವರನಟ ಡಾ.ರಾಜಕುಮಾರ್ ಅವರ 93ನೇ ಹುಟ್ಟುಹಬ್ಬ (Dr Rajkumar Birthday) .

ಕರುನಾಡಿಗೆ ಒಂದು ರೀತಿ ವಿಶೇಷ. ಸತತ ಎರಡು ವರ್ಷ ಈ ಕೊರೋನಾ (Corona) ವೈರೆಸ್ ನಿಂದ ಯಾವ ನಟರು ಸಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಜೊತೆಗೆ ಅಪ್ಪಾಜಿಯಯ ಹುಟ್ಟುಹಬ್ಬ ಕೂಡ ಆಚರಣೆ ಮಾಡಿರಲಿಲ್ಲ.

ಅಣ್ಣಾವ್ರು ಇಲ್ಲ.. ಅಪ್ಪುನೂ ಇಲ್ಲ ಅನ್ನೋ ಬೇಜಾರು!

ಈ ವರ್ಷವೂ ಅಣ್ಣಾವ್ರ ಹುಟ್ಟುಹಬ್ಬ ಹೆಚ್ಚು ಅದ್ಧೂರಿಯಿಂದ ಆಚರಿಸುವುದು ಅನುಮಾನವಾಗಿದೆ.ಅದಕ್ಕೆ ಕಾರಣ ಏನು ಎಂದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ‘ರಾಜರತ್ನ’ ಪುನೀತ್​ ರಾಜ್​ಕುಮಾರ್​ ಅವರ ಅಗಲಿದ ನಂತರ, ಮೊದಲ ಬಾರಿಗೆ ಅಣ್ಣಾವ್ರ ಹುಟ್ಟುಹಬ್ಬ ಬಂದಿದೆ. ಪ್ರತಿ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು ಪುನೀತ್​ ರಾಜ್​ಕುಮಾರ್​ ಅಪ್ಪಾಜಿ ಸಮಾಧಿಗೆ ತೆರಳಿ ಪೂಜೆ ಮಾಡುತ್ತಿದ್ದರು. ಆದರೆ, ಈ ಬಾರಿ ಅಪ್ಪು, ಅಪ್ಪಾಜಿ ಪಕ್ಕದಲ್ಲೇ ಶಾಶ್ವತವಾಗಿ ಮಲಗಿದ್ದಾರೆ. ಇದೆಲ್ಲದರ ನಡುವೆ ರಾಜ್ಯದಲ್ಲಿಂದು ಅಪ್ಪಾಜಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.

ಯುಗಪುರುಷ ‘ರಾಜ’ರತ್ನ

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್… ಹೀಗೆಂದರೆ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಯಾಕೆಂದ್ರೆ ಚಾಮರಾಜನಗರದ ಸಿಂಗಾನಲ್ಲೂರು ಎಂಬ ಕುಗ್ರಾಮದ ಪುಟ್ಟ ಬಾಲಕ ‘ಮುತ್ತುರಾಜನನ್ನು ಎದೆಗಾನಿಸಿಕೊಂಡು ‘ಡಾ.ರಾಜಕುಮಾರ’ನನ್ನಾಗಿ ಮಾಡಿದ್ದು ಇದೇ ಅಭಿಮಾನಿ ದೇವರುಗಳು. ಅವರಿಗೆ ರಾಜ್ ಎಂದರೆ ಮನೆಮಗ…
ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗ ಈ ‘ಗಾಜನೂರು ಗಂಡು’. ಬಡತನ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್, ದ್ದು ನಾಲ್ಕನೇ ಕ್ಲಾಸ್. ಆದರೆ ಸಾಧನೆ ಮಾತ್ರ ಶಿಖರದಷ್ಟು. ಬಹುಶಃ ಸ್ಯಾಂಡಲ್ವುಡ್ ಒಂದೇ ಅಲ್ಲ, ಭಾರತೀಯ ಚಿತ್ರರಂಗ.. ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ರಾಜ್ ಕುಮಾರ್ ಅವ್ರಿಗೆ ಸರಿಸಾಟಿಯಾದವರು ಯಾರು ಇಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ರಾಜ್ ಗೆ ರಾಜ್ ಒಬ್ಬರೇ ಸರಿಸಾಟಿ!

ಬದುಕು ಬದಲಿಸಿದ ‘ಕಣ್ಣಪ್ಪ’

ಡಾ.ರಾಜ್ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಅಸಲಿಗೆ ರಾಜ್ ಬೇಡರ ಕಣ್ಣಪ್ಪ ಸಿನಿಮಾಗೂ ಮೊದಲೇ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ರಾಜ್ ತಂದೆ ರಂಗಭೂಮಿ ಕಲಾವಿದರಾಗಿದ್ರಿಂದ ರಾಜ್ ಗೂ ಬಣ್ಣದ ನಂಟಿತ್ತು. ಕೆಲವೊಂದಿಷ್ಟು ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ ರಾಜ್, 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನ ಪಾತ್ರ ಮಾಡಿದ್ರು. ಅಲ್ಲಿಗೆ ‘ಮುತ್ತುರಾಜ್’ ಎಂಬ ಹಳ್ಳಿ ಹೈದನ ಬದುಕೇ ಬದಲಾಯಿತು. ‘ಮುತ್ತುರಾಜ’ ಕನ್ನಡಿಗರ ಮನೆ ಮನೆಯ ‘ರಾಜಕುಮಾರ’ನಾಗಿ ಬೆಳೆದ್ರು, ಉಳಿದ್ರು…

ಅತ್ಯಧಿಕ ಸಿನಿಮಾಗಳ ‘ನಟಸಾರ್ವಭೌಮ’

ಬೇಡರ ಕಣ್ಣಪ್ಪನಿಂದ ಶುರುವಾದ ರಾಜ್ ಸಿನಿ ಪಯಣ ತಡೆಯಿಲ್ಲದೇ ಸಾಗಿತು. ಬೇಡರ ಕಣ್ಣಪ್ಪನಿಂದ ಶಬ್ದವೇದಿವರೆಗೂ ರಾಜ್ ಮುಟ್ಟಿದ್ದೆಲ್ಲವೂ ಚಿನ್ನ, ಅಭಿನಯಿಸಿದ್ದೆಲ್ಲವೂ ಚೆನ್ನ. ಬೇಡರ ಕಣ್ಣಪ್ಪ, ಓಹಿಲೇಶ್ವರ, ಭೂಕೈಲಾಸ, ರಣಧೀರ ಕಂಠೀರವ, ದಶಾವತಾರ, ಭಕ್ತ ಕನಕದಾಸ, ವಿಜಯನಗರದ ವೀರಪುತ್ರ, ಇಮ್ಮಡಿ ಪುಲಕೇಶಿ, ಹುಲಿಯ ಹಾಲಿನ ಮೇವು, ವೀರ ಕೇಸರಿ, ಶ್ರೀಕೃಷ್ಣ ದೇವರಾಯ, ಮಂತ್ರಾಲಯ ಮಹಾತ್ಮೆ, ಸತ್ಯಹರೀಶ್ಚಂದ್ರ, ಸನಾದಿ ಅಪ್ಪಣ್ಣ, ಬೀದಿ ಬಸವಣ್ಣ, ಬಂಗಾರದ ಮನುಷ್ಯ, ಜೇಡರಬಲೆ, ಮೇಯರ್ ಮುತ್ತಣ್ಣ, ಭಲೇಜೋಡಿ, ಗೋವಾದಲ್ಲಿ ಸಿಐಡಿ 999, ಕಸ್ತೂರಿ ನಿವಾಸ, ಹೊಸಬೆಳಕು, ಕವಿರತ್ನ ಕಾಳಿದಾಸ, ಸಿಪಾಯಿ ರಾಮು, ಶಂಕರ್ ಗುರು, ಬಂಗಾರದ ಪಂಜರ, ಭಕ್ತ ಪ್ರಹ್ಲಾದ, ದಾರಿತಪ್ಪಿದ ಮಗ, ಭಾಗ್ಯವಂತರು, ಆಪರೇಷನ್ ಡೈಮಂಡ್ ರಾಕೆಟ್, ಗಂಧದಗುಡಿ, ಶಬ್ದವೇದಿ… ಊಫ್.. ರಾಜ್ ಅಭಿನಯಿಸಿದ್ದು ಒಂದೇ, ಎರಡೇ… ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್ ನಟಿಸಿದ್ದಾರೆ.

ಅಣ್ಣಾವ್ರಿಗೆ ಸರಿಸಾಟಿ ಮತ್ತೊಬ್ಬ ನಟನಿಲ್ಲ!

ಬರೀ ಸಂಭಾವನೆಗಾಗಿ ನಟಿಸಿದ್ದಾರೆ ಅಂದುಕೊಂಡರೆ ತಪ್ಪು. ಆ ಪಾತ್ರಗಳೇ ರಾಜ್ ಆಗಿದ್ದಾರೆ. ಬಂಗಾರದ ಮನುಷ್ಯದ ಮಾದರಿ ಯುವಕ ರಾಜೀವ, ಕಸ್ತೂರಿ ನಿವಾಸದ ತ್ಯಾಗಮೂರ್ತಿ, ಭಕ್ತಕನಕ ದಾಸ ಸಿನಿಮಾದ ಭಕ್ತ, ಭಕ್ತ ಪ್ರಹ್ಲಾದದ ರಾಕ್ಷಸ ಹಿರಣ್ಯ ಕಷ್ಯಪ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣ ದೇವರಾಯನ ರಾಜ, ದೇವತೆ, ರಾಕ್ಷಸ, ಶ್ರೀಮಂತ, ಬಡವ, ವೈದ್ಯ, ಮೇಯರ್, ಮುಗ್ಧ, ಹುಚ್ಚ, ಅಪ್ಪ, ಪುಂಡ ಮಗ, ಸಾಹುಕಾರ, ಆಳು, ಶಿಕ್ಷಕ, ಪ್ರೇಮಿ, ವಿರಹಿ, ತ್ಯಾಗಿ, ಪೊಲೀಸ್ ಅಧಿಕಾರಿ, ರೈತ, ಸಂಪತ್ತಿಗೆ ಸವಾಲು ಹಾಕುವ ಆಂಗ್ರಿ ಯಂಗ್ ಮ್ಯಾನ್.. ಹೀಗೆ ನೂರಾರು ಪಾತ್ರ ಮಾಡಿದ್ದ ಬಹುಶಃ ರಾಜ್ ಒಬ್ಬರೇ ಇರಬೇಕು. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಅಭಿನಯಿಸದ ಪಾತ್ರವಿಲ್ಲ ಅನ್ನೋದು ಇಡೀ ಭಾರತೀಯ ಚಿತ್ರರಂಗಕ್ಕೇ ಗೊತ್ತಿರೋ ವಿಚಾರ.

ರಾಜ್ ಅಂದ್ರೆ ರೀಲ್ ಹೀರೋ ಅಷ್ಟೇ ಅಲ್ಲ, ರಿಯಲ್ ಹೀರೋ!

ಒಬ್ಬ ಕಲಾವಿದ ವೆರೈಟಿ ಪಾತ್ರಗಳನ್ನ ಮಾಡಿದ್ದಾನೆ ಅನ್ನೋದಷ್ಟೇ ದೊಡ್ಡ ವಿಚಾರವಲ್ಲ. ಆ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಳಕಳಿ ರಾಜ್ ಕುಮಾರ್ ಅವ್ರಿಗಿತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಅಂತ ಪ್ರೊಡ್ಯೂಸರ್ ಗಳಿಗೆ ಖಡಕ್ ಆಗಿಯೇ ಹೇಳ್ತಿದ್ದರಂತೆ.
ಮತ್ತೊಂದು ವಿಶೇಷ ಅಂದ್ರೆ ಪಾತ್ರಗಳಿಗೆ ಜೀವ ತುಂಬುವ ರಾಜ್, ಆ ಪಾತ್ರಕ್ಕಾಗಿ ತಪ್ಪಸ್ಸೇ ಮಾಡ್ತಿದ್ರು. ಇದಕ್ಕೊಂದು ಚಿಕ್ಕ ಉದಾಹರಣೆ ಅಂದ್ರೆ ‘ಮಂತ್ರಾಲಯ ಮಹಾತ್ಮೆ’ ಸಿನಿಮಾ. ಅಸಲಿಗೆ ರಾಜ್ ನಾನ್ ವೆಜ್ ಪ್ರಿಯ. ನಾಟಿ ಕೋಳಿ ಸಾರು, ಮುದ್ದೆ ಅಂದ್ರೆ ಅವರಿಗೆ ಪಂಚಪ್ರಾಣ. ಹೀಗಿದ್ದರು ‘ಮಂತ್ರಾಲಯ ಮಹಾತ್ಮೆ’ಯ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಪಾತ್ರಕ್ಕಾಗಿ ರಾಜ್ ನಾನ್ ವೆಜ್ ತ್ಯಜಿಸಿದ್ದರು. ಪಾತ್ರ ಒಪ್ಪಿಕೊಂಡ ದಿನದಿಂದಲೇ ಶೂಟಿಂಗ್ ಮುಗಿಯೋ ತನಕ ಕೋಳಿ ಸಾರಿನ ಜೊತೆ ರಾಜ್ ಟೂ ಬಿಟ್ಟಿದ್ರು!

ನಟನಳಗೊಬ್ಬ ಗಾಯಕ!

ಡಾ.ರಾಜ್ ಬರೀ ನಟರೊಂದೇ ಅಲ್ಲ, ಗಾಯಕರಾಗಿಯೂ ಪ್ರಸಿದ್ಧರು. ತಮ್ಮ ಗಾಯನಕ್ಕಾಗೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್. ‘ಸಂಪತ್ತಿಗೆ ಸವಾಲ್’ ಸಿನಿಮಾದ ಹಾಡಿನಿಂದ ಶುರುವಾದ ರಾಜ್ ಗಾಯನಯಾತ್ರೆ ಕೊನೆಯವರೆಗೂ ಸಾಗುತ್ತಲೇ ಇತ್ತು. ಬರೀ ತಮ್ಮೊಬ್ಬರಿಗೆ ಅಷ್ಟೇ ದನಿನೀಡಿಲ್ಲ ರಾಜ್. ಕನ್ನಡದ ಅದೆಷ್ಟೋ ಹಿರಿ-ಕಿರಿಯ ನಟರಿಗೆ ದನಿಯಾಗಿದ್ದು ಗಾನಗಂಧರ್ವನ ಹೆಚ್ಚುಗಾರಿಕೆ. ತಮ್ಮ ಕಂಠಸಿರಿಗಾಗೇ ‘ಜೀವನಚೈತ್ರ’ ಸಿನಿಮಾದ ‘ನಾದಮಯ’ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದು, ಇಡೀ ಲೋಕವೇ ತಿರುಗಿ ನೋಡುವಂತೆ ಮಾಡಿದ್ದರು. ಇನ್ನೊಂದು ವಿಶೇಷ ಅಂದ್ರೆ ಅದೆಷ್ಟೋ ಹಾಡು ಹಾಡಿ, ಅದೆಷ್ಟೋ ಸ್ಟಾರ್ ನಟರಿಗೆ ದನಿ ನೀಡಿದ್ದ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವ್ರಿಗೂ ದನಿಯಾಗಿದ್ದು ನಮ್ಮ ರಾಜಣ್ಣ.

ಪ್ರಶಸ್ತಿಗೇ ರಾಜಭೂಷಣ!

ರಾಜ್ ಕುಮಾರ್ ಯಾವಾಗಲೂ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋದವ್ರಲ್ಲ, ಬದಲಾಗಿ ಅವರ ಪ್ರತಿಭೆಯನ್ನು ನೋಡಿ ಪ್ರಶಸ್ತಿಗಳೇ ಹುಡುಕಿಕೊಂಡು ಬಂದಿವೆ. ಇವರಿಗಾಗಿಯೇ ಅದೆಷ್ಟೋ ಪ್ರಶಸ್ತಿಗಳು ಹುಟ್ಟಿಕೊಂಡಿವೆ. ಹೂವಿನ ಜೊತೆ ನಾರು ಸ್ವರ್ಗ ಸೇರಿತು ಎನ್ನುವಂತೆ ರಾಜ್ ಕುಮಾರ್ ಗೆ ಪ್ರಶಸ್ತಿ ನೀಡಿದ ಮೇಲೆಯೇ ಆ ಪ್ರಶಸ್ತಿಗಳಿಗೆ ಒಂದು ಹೆಸರು ಬಂದಿದೆ ಅಂದರೆ ಅತಿಶಯೋಕ್ತಿಯೇನಲ್ಲ.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ, ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ, ನಾಡೋಜ, ಗೌರವ ಡಾಕ್ಟರೇಟ್ ಸೇರಿದಂತೆ ರಾಜ್ಯ, ದೇಶ, ವಿದೇಶದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪ್ರಶಸ್ತಿ ಈ ವಿಜಯನಗರದ ವೀರಪುತ್ರನ ಕೀರ್ತಿ ಕಿರೀಟ ಸೇರಿದೆ.

ಬಿರುದುಗಳಲ್ಲೂ ನಂಬರ್ ಒನ್ ರಾಜಣ್ಣ!

ಬಹುಶಃ ರಾಜ್ ಕುಮಾರ್ ಅವ್ರಿಗೆ ಇರುವಷ್ಟು ಬಿರುದುಗಳು ಬೇರೆ ಯಾವ ನಟನಿಗೂ ಸಿಕ್ಕಿಲ್ಲ, ಸಿಗೋದೂ ಇಲ್ಲ. ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಯೋಗರಾಜ, ಗಾನಗಂಧರ್ವ, ವರನಟ, ಅಭಿಮಾನಿಗಳ ದೇವರು ಹೀಗೆ ನೂರಕ್ಕೂ ಹೆಚ್ಚು ಬಿರುದುಗಳು ರಾಜ್ ಅವ್ರಿಗಿವೆ. ಆದ್ರೆ ಜನ್ರು ಅವರನ್ನು ಪ್ರೀತಿಯಿಂದ ಕರೆದಿದ್ದು ಅಣ್ಣಾವ್ರು. ಅವ್ರೂ ಸಹ ಅಭಿಮಾನಿಗಳನ್ನು ಬರೀ ಅಭಿಮಾನಿಗಳು ಅಂತ ಕರೆಯದೇ ಅಭಿಮಾನಿ ದೇವರು ಅಂತ ಕರೆದು ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈ ಮೂಲಕ ನೀವಿಲ್ಲದೇ ನಾವಿಲ್ಲ ಅನ್ನೋ ಸಂದೇಶ ಸಾರಿದ್ರು.

ಕನ್ನಡಕ್ಕಾಗಿ ಜೀವಿಸಿದ್ದ ಕನ್ನಡಿಗರ ಕಣ್ಮಣಿ

ರಾಜಕುಮಾರ್ ಕನ್ನಡಕ್ಕಾಗೇ ಹುಟ್ಟಿದವರು ಅಂದ್ರೆ ತಪ್ಪಾಗೋದಿಲ್ಲ. ನಾಡು, ನುಡಿ, ನೆಲ-ಜಲಕ್ಕೆ ಧಕ್ಕೆ ಬಂದಾಗ ಹೋರಾಟದ ಮುಂಚೂಣಿಯಲ್ಲಿ ಇರ್ತಾ ಇದ್ದಿದ್ದು ಇದೇ ಅಣ್ಣಾವ್ರು. ಕರುನಾಡಿನ ಹಿರಿಯಣ್ಣನಾಗಿ ಗೋಕಾಕ್ ಚಳುವಳಿ ನಡೆಸಿದ್ದು, ಆ ಮೂಲಕ ಕನ್ನಡಿಗರ ದನಿಯಾಗಿದ್ದು ಈಗ ಇತಿಹಾಸ. ಕಾವೇರಿ ಹೋರಾಟ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮುಂತಾದ ಹೋರಾಟಗಳಲ್ಲಿ ರಾಜ್ ಭಾಗಿಯಾಗಿ, ಹೋರಾಟಗಳನ್ನು ಯಶಸ್ವಿಯಾಗಿಸಿದ್ದರು. ಇನ್ನು ಶುದ್ಧ ಕನ್ನಡ ಅಂದ್ರೆ ಅದು ರಾಜ್ ಕುಮಾರ್ ಮಾತನಾಡೋ ಭಾಷೆ ಅನ್ನೋದು ಪ್ರತಿಯೊಬ್ಬ ಕನ್ನಡಿಗರು ಒಪ್ಪೋ ಮಾತು.

ಹೃದಯ ‘ಶ್ರೀಮಂತ’ ರಾಜ್:

ಡಾ.ರಾಜ್ ಕುಮಾರ್ ಈಗಾಗಲೇ ಹೇಳಿದಂತೆ ಬರೀ ಸಂಭಾವನೆಗಾಗಿ ನಟಿಸಿದವರಲ್ಲ. ಬದಲಾಗಿ ಆ ಪಾತ್ರ ಸಮಾಜಕ್ಕೊಂದು ಸಂದೇಶ ಕೊಡುತ್ತದೆಯೋ ಇಲ್ವೋ ಅಂತ ನೋಡ್ತಿದ್ದರು. ಅಷ್ಟು ದೊಡ್ಡ ಸ್ಟಾರ್ ಆದ್ರೂ ಎಂದೂ ತಮ್ಮ ಸ್ಟಾರ್ ಗಿರಿ ತೋರಿಸಿದವ್ರಲ್ಲ. ಹಣ, ಪ್ರಶಸ್ತಿ, ಹೆಸರು ಬಂದಮೇಲೂ ತಾವು ನಡೆದು ಬಂದ ದಾರಿ ಮರೆತವರಲ್ಲ. ಬಡ ನಿರ್ಮಾಪಕರಿಗಾಗಿ ಅದೆಷ್ಟೋ ಬಾರಿ ದುಡ್ಡು ಪಡೆಯದೇ ಅಥವಾ ಕಡಿಮೆ ಸಂಭಾವನೆ ಪಡೆದು ನಟಿಸಿದ್ದ ಬಗ್ಗೆ ಗಾಂಧಿನಗರದ ಸಿನಿ ಪಂಡಿತರೂ ಈಗಲೂ ಹೇಳ್ತಾರೆ. ಇನ್ನು ಸಹ ಕಲಾವಿದರನ್ನೂ ಹಿರಿಯಣ್ಣನಂತೆ, ತಂದೆಯಂತೇ, ಮನೆ ಮಗನಂತೆ ಮಾತನಾಡಿಸ್ತಿದ್ದರು. ಅವರ ಜೊತೆ ಕುಳಿತುಕೊಂಡೇ ನೆಲದ ಮೇಲೆ ಊಟ ಮಾಡ್ತಿದ್ರು ಈ ಸಿಂಪಲ್ ಮ್ಯಾನ್.

ರಾಜಕೀಯದಿಂದ ದೂರ ರಾಜಣ್ಣ

ರಾಜ್ ಅಂದ್ರೆ ಜನ ಹಿಂದೆ ಹಿಂದೆ ಬರ್ತಿದ್ರು. ಇದನ್ನ ಎನ್ ಕ್ಯಾಶ್ ಮಾಡಿಕೊಳ್ಳೋಕೆ ರಾಜಕೀಯ ಪಕ್ಷಗಳು ಕಾಯ್ತಾ ಇದ್ದವು. ಪಕ್ಕ ಆಂಧ್ರದ ಎನ್.ಟಿ.ಆರ್. ತಮಿಳಿನ ಎಂಜಿಆರ್ ಸೇರಿದಂತೆ ಕೆಲ ಸೂಪರ್ ಸ್ಟಾರ್ ಗಳು ರಾಜಯಕೀಯ ರಂಗಕ್ಕೆ ಧುಮುಕಿ ಯಶಸ್ವಿಯೂ ಆಗಿದ್ರು. ಆದರೆ ರಾಜ್ ಎಂಬ ಈ ಮನುಷ್ಯ ರಾಜಕೀಯವನ್ನು ಹತ್ತಿರಕ್ಕೂ ಬಿಟ್ಟುಕೊಂಡವ್ರಲ್ಲ. ಒಂದು ವೇಳೆ ರಾಜಕೀಯಕ್ಕೆ ಬಂದಿದ್ದರೆ ಸುಲಭವಾಗಿ ಗೆಲ್ಲಬಹುದಿತ್ತು. ಮನಸ್ಸು ಮಾಡಿದ್ರೆ ಸಿಎಂ ಕೂಡ ಆಗಬಹುದಿತ್ತು. ಆದ್ರೆ ಸಿನಿಮಾಗಾಗಿಯೇ ನಾನು ಹುಟ್ಟಿದ್ದು, ಕೊನೆ ಉಸಿರುರೋವರೆಗೂ ನಟಿಸುತ್ತೇನೆ ಅಂತಿದ್ದರು ರಾಜ್. ಹಾಗೇ ನಡೆದುಕೊಂಡರೂ ಕೂಡ…

ರಾಜ್ ಕುಮಾರ್ ಕೀರ್ತಿ ಬರೀ ಚಂದನವನಕ್ಕಷ್ಟೇ ಸೀಮಿತವಾಗಿರಲಿಲ್ಲ. ರಾಜ್ ಕುಮಾರ್ ಬಗ್ಗೆ ಇಡೀ ಭಾರತೀಯ ಚಿತ್ರರಂಗಕ್ಕೇ ಗೊತ್ತಿತ್ತು. ಬಿಗ್ ಬಿ ಅಮಿತಾಬ್ ಬಚ್ಚನ್, ಎನ್.ಟಿ.ರಾಮರಾವ್, ಎಂಜಿಆರ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ಖ್ಯಾತನಾಮರೆಲ್ಲ ಅಣ್ಣಾವ್ರ ಫ್ಯಾನ್ಸ್. ಎಂಜಿಆರ್, ಎನ್.ಟಿ.ಆರ್. ಎಲ್ಲಾ ಸೇರಿದ್ರೆ ಒಬ್ಬ ರಾಜ್ ಆಗ್ತಾರೆ ಅಂತ ಖುದ್ದು ರಜನಿಕಾಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ರಜನಿಯಂತ ರಜನಿಯೇ ನಿಮ್ಮ ಆಟೋಗ್ರಾಫ್ ಬೇಕು ಅಂತ ಕೇಳಿ ಪಡೆದಿದ್ದು ರಾಜ್ ಕುಮಾರ್ ಅವರ ಬಳಿ ಮಾತ್ರ.

ರಾಜ್, ವೀರಪ್ಪನ್ ಮತ್ತು ವಿವಾದ

ಕಾಡುಗಳ್ಳ, ನರಹಂತಕ ವೀರಪ್ಪನ್ 2000ನೇ ಇಸ್ವಿಯಲ್ಲಿ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಬರೋಬ್ಬರಿ 108 ದಿನಗಳ ಕಾಲ ರಾಜ್ ಕುಮಾರ್ ಅವ್ರನ್ನು ಕಾಡಲ್ಲೇ ಇರಿಸಿಕೊಂಡಿದ್ದ. ಆಗ ಕನ್ನಡಿಗರು 108 ದಿನಗಳ ಕಾಲ ಉಸಿರು ಬಿಗಿಹಿಡಿದು ಕಾದಿದ್ದರು.ಇನ್ನು ಡಾ.ರಾಜ್ ಕುಮಾರ್ ಕೂಡ ವಿವಾದಗಳಿಂದ ಹೊರತಾಗಿಲ್ಲ. ನಟಿ ಲೀಲಾವತಿ ಜೊತೆಗಿನ ಸಂಬಂಧ, ನಟ ವಿಷ್ಣುವರ್ಧನ್ ಜೊತೆಗಿನ ವೈಮನಸ್ಸು ವಿವಾದಕ್ಕೆ ಕಾರಣವಾಗಿತ್ತು.

ರಾಜ್ ಯುಗಾಂತ್ಯ

ಇಂತಿಪ್ಪ ಡಾ.ರಾಜ್ ಎಂಬ ಅದ್ಭುತ ನಟ, ಕನ್ನಡಿಗರ ಕಣ್ಮಣಿ 2006ರ ಏಪ್ರಿಲ್ 12ರಂದು ತಮ್ಮ ಅವತಾರ ಮುಗಿಸಿದ್ರು. ಆಗ ಅಭಿಮಾನಿಗಳು
ಗಲಾಟೆ, ದೊಂಬಿ ನಡೆಸಿದ್ದು, ಗೋಲಿಬಾರ್ ಆಗಿದ್ದು, ಅಭಿಮಾನಿಗಳು ಪ್ರಾಣ ತ್ಯಜಿಸಿದ್ದು ಕರುನಾಡ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ದಾಖಲಾಗಿವೆ.

ಕನ್ನಡಕ್ಕೋಬ್ಬರೇ ರಾಜ್

ಕಲಾವಿದರು ಸಾವಿರಾರು ಜನ ಹುಟ್ಟುತ್ತಾರೆ. ಆದ್ರೆ ಕಲಾವಿದರೆಲ್ಲ ರಾಜ್ ಕುಮಾರ್ ಆಗೋಕೆ ಸಾಧ್ಯನೇ ಇಲ್ಲ. ರಾಜ್ ಎಂಬುದು ಪ್ರತಿಭೆಗಳ ಸಾಗರ. ಅವರ ಬಗ್ಗೆ ಏನೇ ವರ್ಣಿಸಿದ್ರೂ, ಅವ್ರ ಬಗ್ಗೆ ಏನೇ ಬರೆದರೂ ಅದು ಬೊಗಸೆಯಲ್ಲಿ ನೀರು ಹಿಡಿದಷ್ಟೇ. ಪ್ರತಿ ಕನ್ನಡಿಗರ ಹೃದಯದಲ್ಲಿ, ಕನ್ನಡಿಗರ ಮನೆ-ಮನಗಳಲ್ಲಿ ರಾಜ್ ಎಂದಿಗೂ ಅಮರ. ಅವರ ನುಡಿ, ನಡೆ, ಅವರ ಸಿನಿಮಾ ಎಂದಿಗೂ ಅಜರಾಮರ. ಯಾಕೆಂದ್ರೇ ಕನ್ನಡಕ್ಕೊಬ್ರೇ ರಾಜ್…


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ