ಬೆಂಗಳೂರು, ಸೆ.2- ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಮುಗಿದಿದ್ದರೂ ಮಾತೃ ಹುದ್ದೆಗೆ ತೆರಳದೆ ಇನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿ ವಿವಿಧ ಇಲಾಖೆಗಳಲ್ಲಿ ಅವಧಿ ಮುಗಿದಿದ್ದರೂ ಐದಾರು ವರ್ಷಗಳಿಂದ ಅದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರಂತೂ ರಾಜಕೀಯ ಪ್ರಭಾವ ಬಳಸಿ ಅದೇ ಹುದ್ದೆಯಲ್ಲಿ ಬಲವಾಗಿ ಬೇರೂರಿರುವ ನಿದರ್ಶನಗಳು ಕೂಡ ಇವೆ.
2013ರ ಸೆಕ್ಷನ್-6ರನ್ವಯ ನಿಯೋಜನೆ ಮೇರೆಗೆ ನೇಮಿಸಿದ ಅಧಿಕಾರಿಗಳ ಅವಧಿ 3 ವರ್ಷಗಳಾಗಿದ್ದು, ಅವಧಿ ಮುಗಿದಿರುವ ಅಧಿಕಾರಿಗಳು ಮಾತೃ ಹುದ್ದೆಗೆ ತೆರಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೂ, ಈ ಆದೇಶ ಧಿಕ್ಕರಿಸಿ ಕೆಲ ಅಧಿಕಾರಿಗಳು ಲಾಭದಾಯಕ ಹುದ್ದೆಗಳಲ್ಲಿ ತೊಡಗಿಸಿಕೊಂಡು ಕೋಟ್ಯಂತರ ಹಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
ವೈದ್ಯರೇ ಜಾಸ್ತಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ನಿಯೋಜನೆ ಮೇರೆಗೆ ಒಟ್ಟು 32 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಅಧಿಕಾರಿಗಳ ಅವಧಿ ಈಗಾಗಲೇ ಮುಗಿದಿದೆ. ಡಾ. ಎಸ್.ರಿಯಾಜ್ ಭಾಷಾ, ಡಾ.ಷಣ್ಮುಖಪ್ಪ, ಡಾ.ಎಸ್.ಟಿ. ಶ್ರೀನಿವಾಸಮೂರ್ತಿ ಇತರೆ ಅಧಿಕಾರಿಗಳು ನಿಯೋಜನೆ ಮೇರೆಗೆ ಉಪ ಕುಲಸಚಿವರು ಸೇರಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಆ ಎಲ್ಲ ಅಧಿಕಾರಿಗಳ ಅವಧಿ ಮುಗಿದಿದೆ. ಅಲ್ಲದೆ, ಇಂಥ ಅಧಿಕಾರಿಗಳು ತಮ್ಮ ಮಾತೃ ಹುದ್ದೆ ಗಳಲ್ಲಿ ತೆರಳಿ ಕೆಲಸ ಮಾಡುವಂತೆ ಸರ್ಕಾರ ಆದೇಶಿಸಿದ್ದರೂ ಇನ್ನೂ ಹೋಗದಿರುವುದು ದುರದೃಷ್ಟಕರ.
ಒಂದು ಬಾರಿ ಅವಕಾಶ: ಪರಸ್ಪರ ವರ್ಗಾವಣೆ ಹಾಗೂ ನಿಯೋಜನೆ ಸೌಲಭ್ಯವನ್ನು ಸರ್ಕಾರಿ ನೌಕರನ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ನೀಡಬಹುದು. ಆದರೆ, ಕೆಲವರಂತೂ ರಾಜಕೀಯ ಪ್ರಭಾವ ಬಳಸಿ ತಮಗಿಷ್ಟವಾದ ಹುದ್ದೆಗಳಲ್ಲಿ ನಿಯೋಜನೆ ಮಾಡಿಸಿಕೊಳ್ಳುತ್ತಿರುವುದು ದುರದೃಷ್ಟಕರ.
ಅಲ್ಲದೆ, ಸರ್ಕಾರಿ ನೌಕರರನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ನಿಯೋಜನೆ ಮಾಡುವ ಸಂದರ್ಭದಲ್ಲಿ ಮಾತೃ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವೆಂದು ಸರ್ಕಾರವೇ ತಿಳಿಸಿದೆ.
ಆದರೆ, ಇತ್ತೀಚಿನ ಹಲವು ಪ್ರಕರಣಗಳಲ್ಲಿ ನಿಯೋಜನೆ ಮೇರೆಗೆ ವರ್ಗಾಯಿಸುವ ಸಂದರ್ಭದಲ್ಲಿ ಮಾತೃ ಇಲಾಖೆಯು ನಿಯೋಜನೆ ಆದೇಶ ಆಗುವ ಮೊದಲೇ ಕರ್ತವ್ಯದಿಂದ ಬಿಡುಗಡೆಯಾಗುತ್ತಿದ್ದಾರೆ. ಈ ಕ್ರಮದಿಂದ ಸರ್ಕಾರಿ ಕೆಲಸಗಳಿಗೆ ತೊಂದರೆ ಆಗುವುದಲ್ಲದೆ ಸರ್ಕಾರಿ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ.