ಶಿವಮೊಗ್ಗ: ಹಿಂದಿನ ವರ್ಷ 2021-22ನೇ ಸಾಲಿನ ಬಜೆಟ್ ಮಂಡಿಸುವಾಗ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ಸಹಜವಾಗಿಯೇ ಇದ್ದ ನಿರೀಕ್ಷೆಗಳಂತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂತಹ ನಿರೀಕ್ಷೆಗಳಿಲ್ಲದಿದ್ದರೂ ಬಾಕಿ ಉಳಿದ ಕಾಮಗಾರಿಗಳಿಗೆ ಅನುದಾನ ಘೋಷಿಸಬೇಕಿದೆ.
ದಶಕದಿಂದ ನನೆಗುದಿಗೆ ಬಿದ್ದಿದ್ದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗೆ ಬಜೆಟ್ ನೀಡುವ ಮೂಲಕ ಮತ್ತಷ್ಟು ಹಣ ನೀಡಿದ್ದರು. ಸೋಗಾನೆ ವಿಮಾನ ನಿಲ್ದಾಣದಲ್ಲಿ ಏರ್ಬಸ್ ಮಾದರಿಯ ವಿಮಾನಗಳು ಇಳಿಯಲು ಸಾಧ್ಯವಾಗುವಂತಹ ರನ್ವೇ ರೂಪಿಸಲಾಗುತ್ತಿದೆ.
₹ 384 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣ ಶೀಘ್ರ ಪೂರ್ಣಗೊಳ್ಳಲಿದೆ. ಪ್ರವಾಸೋದ್ಯಮ, ಕೈಗಾರಿಕಾ ಅಭಿವೃದ್ಧಿ, ಸ್ಥಳೀಯರ ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ. ₹ 258 ಕೋಟಿ ವೆಚ್ಚದ ಟರ್ಮಿನಲ್ ಕಟ್ಟಡ ನಿರ್ಮಾಣವಾಗುತ್ತಿದೆ.
ಆಯುಷ್ ವಿಶ್ವವಿದ್ಯಾಲಯ: ದಕ್ಷಿಣ ಭಾರತದಲ್ಲಿ ಪ್ರಥಮ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಗೆ ಯಡಿಯೂರಪ್ಪ ಆನುಮೋದನೆ ನೀಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಆರಂಭಿಕ ವೆಚ್ಚವಾಗಿ ₹ 20 ಕೋಟಿ ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಮಹಾವಿದ್ಯಾಲಯ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜತೆಗೆ ಆಯುರ್ವೇದ, ಯುನಾನಿ, ಯೋಗ, ಸಿದ್ದ, ಹೋಮಿಯೋಪಥಿ ಒಳಗೊಂಡ ಆಯುಷ್ ವಿಶ್ವವಿದ್ಯಾಲಯ ಶಿವಮೊಗ್ಗ ಸಮೀಪದ ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ. ಈ ಬಜೆಟ್ನಲ್ಲಿ ಇನ್ನಷ್ಟು ಅನುದಾನ ಘೋಷಿಸುವ ನಿರೀಕ್ಷೆ ಇದೆ.
ಸರ್ವ ಋತು ಜೋಗಜಲಪಾತ: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ಸ್ಮರಣೀಯವಾಗಿಸಲು, ಸರ್ವ ಋತುಗಳಲ್ಲೂ ಪ್ರವಾಸಿಗರನ್ನು ಸೆಳೆಯಲು ₹ 185 ಕೋಟಿ ಮೀಸಲಿಡಲಾಗಿತ್ತು. ನಂತರ ಮತ್ತಷ್ಟು ಅನುದಾನ ನೀಡಲಾಯಿತು. ಪ್ರವೇಶದ್ವಾರ, ಶರಾವತಿ ವಿಗ್ರಹ, ಮೂರು ಅಟ್ಟಣಿಗೆಯ ವೀಕ್ಷಣಾ ಗ್ಯಾಲರಿ, ವಾಹನಗಳ ನಿಲುಗಡೆ, ಉಪಾಹಾರ ಗೃಹ, ವಿಶ್ರಾಂತಿ ಕೊಠಡಿ, ಬೋಟಿಂಗ್, ಜಲಕ್ರೀಡೆ, ಜಲಪಾತವನ್ನು ಸನಿಹದಿಂದ ನೋಡುವ ಅವಕಾಶ ಕಲ್ಪಿಸುವ ರೋಪ್ ವೇ ಸೇರಿ ಹತ್ತು ಹಲವು ಸೌಲಭ್ಯ ಒದಗಿಸುವ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಸಕ್ರೇಬೈಲಿನ ಆನೆ ಬಿಡಾರದಲ್ಲಿ ಜೈವಿಕ ಉದ್ಯಾನ ನಿರ್ಮಾಣಗೊಳ್ಳಲಿದೆ. ಆನೆ ಕ್ಯಾಂಪ್, ದ್ವೀಪ, ಬೋಟಿಂಗ್, ಸಫಾರಿ ಟ್ರ್ಯಾಕ್ ಸಿದ್ಧವಾಗಲಿವೆ.