ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರು ಮುಂಬೈ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮಧ್ಯದಲ್ಲಿ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದ್ದಾರೆ.
ಆದರೆ ಅದನ್ನು ಪೂರ್ತಿಯಾಗಿಯೂ ಹಾಡಿಲ್ಲ, ಅರ್ಧದಲ್ಲೇ ನಿಲ್ಲಿಸಿ ಕುಳಿತುಕೊಂಡಿದ್ದಾರೆ. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಜನ ಕಿಡಿಕಾರುತ್ತಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸುದ್ದಿಗೋಷ್ಠಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರತೀಯ ಜನತಾ ಪಕ್ಷದ ನಾಯಕರು ಸೇರಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಈ ನಡವಳಿಕೆ ರಾಷ್ಟ್ರಗೀತೆಗೆ ಹಾಗೂ ರವೀಂದ್ರ ನಾಥ್ ಠಾಗೂರ್ ಅವರಿಗೂ ಮಾಡಿದ ಅವಮಾನ ಎಂದು ಆರೋಪಿಸಲಾಗುತ್ತಿದೆ. ಇನ್ನು ಮುಂಬೈ ನಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ.
ಬಂಗಾಳ ಬಿಜೆಪಿ ಅಧ್ಯಕ್ಷ ಡಾ. ಸುಕಾಂತಾ ಮಜುಂದಾರ್, ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಷ್ಟ್ರಗೀತೆಗೆ ಅವಮಾನ ಮಾಡುವಂತಹ ಮುಖ್ಯಮಂತ್ರಿಗಳೂ ಇದ್ದಾರೆ. ಈಗೆಲ್ಲಾ ವಿಪಕ್ಷಗಳಿಗೆ ಭಾರತ ಹಾಗೂ ನಮ್ಮ ಮೌಲ್ಯಗಳನ್ನು ಗೌರವಿಸಬೇಕು ಅಂತ ಹೇಳುವುದೇ ಕ್ಲಿಷ್ಟಕರವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರೇ ಹೀಗೆ ನಡೆದುಕೊಳ್ಳುವುದು ಖಂಡನೀಯ ಹಾಗೂ ನಾಚಿಕೆ ಗೇಡಿ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.