ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಎರಡನೇ ಡೋಸ್ ನೀಡಿಕೆಯ ಸರಾಸರಿ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಲಸಿಕೆ ಅಭಿಯಾನದ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ಅವರು, ಮೊದಲ ಡೋಸ್ ನೀಡಿಕೆ ಸರಾಸರಿ ಶೇ 90 ರಷ್ಟು ಇದೆ. ಎರಡನೇ ಡೋಸ್ ಶೇ 57 ರಷ್ಟಿದೆ. ಡಿಸೆಂಬರ್ ಕೊನೆಯೊಳಗೆ ಎರಡನೇ ಡೋಸ್ ಶೇ 70 ಕ್ಕೆ ತಲುಪಬೇಕು ಎಂದು ಹೇಳಿದರು.
ಎರಡನೇ ಡೋಸ್ ಲಸಿಕೆ ಹಾಕುವಲ್ಲಿ ಕಲಬುರಗಿ ಜಿಲ್ಲೆ ಹಿಂದುಳಿದಿದೆ. ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಎಲ್ಲ ಜಿಲ್ಲಾಧಿಕಾರಿಗಳು ಒಂದು ಗಂಟೆ ಸಮಯವನ್ನು ಲಸಿಕಾ ಕಾರ್ಯಕ್ರಮದ ಪ್ರಗತಿಗೆ ಮೀಸಲಿಡಬೇಕು. ತಂಡಗಳನ್ನು ರಚಿಸಿ ಗ್ರಾಮಗಳಿಗೆ ಕಳುಹಿಸಿ ಲಸಿಕೆ ಪಡೆಯಲು ಜನರ ಮನವೊಲಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.
ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಅಗತ್ಯ ಬಿದ್ದಲ್ಲಿ ತಹಶೀಲ್ದಾರರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜನರೊಂದಿಗೆ ನಿತ್ಯ ವ್ಯವಹರಿಸುವ ಸ್ವಯಂ ಸೇವಕರು, ಶಿಕ್ಷಕರು, ಧಾರ್ಮಿಕ ಗುರುಗಳು, ಶಾಲಾ ಶಿಕ್ಷಕರು, ಸಹಕಾರಿ ಸಂಘಗಳ ಕಾರ್ಯದರ್ಶಿಗಳು, ಬ್ಯಾಂಕಿನ ವ್ಯವಸ್ಥಾಪಕರನ್ನು ಬಳಸಿಕೊಂಡು ಲಸಿಕಾ ಕಾರ್ಯದ ಮಹತ್ವ ತಿಳಿಸುವ ಕಾರ್ಯ ಆಗಬೇಕು ಎಂದರು.
ಕೋವಿಡ್ ಕಡಿಮೆಯಾಗಿದೆ ಎಂಬ ಉದಾಸೀನ ಭಾವ ಬೇಡ. ವಿದೇಶಗಳಲ್ಲಿ ಈಗಾಗಲೇ ಪ್ರಕರಣ ಸಂಖ್ಯೆ ಪುನಃ ಏರಿಕೆಯಾಗಿದೆ. ಮೂರನೇ ಅಲೆಗೆ ಇಲ್ಲಿ ಅವಕಾಶ ನೀಡಬಾರದು ಎಂದೂ ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮತ್ತು ಇತರ ಅಧಿಕಾರಿಗಳು ಇದ್ದರು.