1- ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ-ಸೌಲಭ್ಯ) ಕಾಯ್ದೆ ಅಥವಾ ಕೃಷಿ ಮಾರುಕಟ್ಟೆ ಕಾಯ್ದೆ
ಕೃಷಿ ಮಾರುಕಟ್ಟೆ ಕಾಯ್ದೆಯು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯ ನೀಡುತ್ತದೆ.
ರೈತರು ತಾವು ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ. ಅಲ್ಲದೇ ರೈತರ ಜಮೀನಿಗೇ ತೆರಳಿ ಯಾರು ಬೇಕಾದರೂ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದಾಗಿ, ಎಪಿಎಂಸಿ ಮಂಡಿಗಳ ಮಧ್ಯವರ್ತಿಗಳು ಹಾಗೂ ರಾಜ್ಯ ಸರ್ಕಾರಗಳು ಕಮಿಷನ್ ಹಾಗೂ ಮಂಡಿ ಶುಲ್ಕ ಕಳೆದುಕೊಳ್ಳುತ್ತವೆ. ಸ್ಪರ್ಧೆಯಿಂದಾಗಿ ರೈತರು ತಮ್ಮ ಬೆಳೆಗಳಿಗೆ ಅತ್ಯುತ್ತಮ ಬೆಲೆಯನ್ನು ಪಡೆಯುತ್ತಾರೆ ಹಾಗೂ ಬೆಳೆಯನ್ನು ಸಾಗಿಸುವ ಖರ್ಚು ಕೂಡ ಉಳಿತಾಯವಾಗಲಿದೆ.
ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ಸೆಸ್ ವಿಧಿಸಲಾಗುತ್ತದೆ. ಹೊರಗಡೆ ಖರೀದಿಗೂ ಸೆಸ್ ಪಾವತಿಸಬೇಕಿತ್ತು. ಆದರೆ, ಈಗ ವ್ಯಾಪಾರಿಗಳಿಗೆ ಸೆಸ್ ಪಾವತಿಯ ಹೊರೆ ಇಲ್ಲ. ಮಂಡಿಗಳ ಜೊತೆಗೆ, ಫಾರ್ಮ್ಗೇಟ್, ಶೈತ್ಯಾಗಾರ, ಗೋದಾಮು, ಸಂಸ್ಕರಣಾ ಘಟಕಗಳಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರೆಯುತ್ತದೆ.
2- ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ
ಬಿತ್ತನೆ ಹಂಗಾಮಿಗೆ ಮುನ್ನವೇ ರೈತರು, ಪೂರ್ವ ನಿರ್ಧರಿತ ಬೆಲೆಯೊಂದಿಗೆ ಖರೀದಿದಾರನ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.
ಪೂರ್ವನಿಗದಿತ ಬೆಲೆಯಲ್ಲಿ, ರೈತರು ಕೃಷಿ ಸಂಬಂಧಿತ ಉದ್ಯಮ ನಡೆಸುವ ಕಂಪನಿಗಳು ಅಥವಾ ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಹೊಸ ಕಾಯ್ದೆಯು ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ಒಟ್ಟುಗೂಡಿಸುವವರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರೊಂದಿಗೆ ವಹಿವಾಟು ನಡೆಸಲು ರೈತರಿಗೆ ಅನುವು ಮಾಡುತ್ತದೆ. ಬಿತ್ತನೆಗೆ ಮುನ್ನವೇ ದರದ ಭರವಸೆ ಸಿಗುತ್ತದೆ. ಮಾರುಕಟ್ಟೆ ಬೆಲೆ ಹೆಚ್ಚಾದ ಸಂದರ್ಭದಲ್ಲಿ, ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಪಡೆಯುತ್ತಾರೆ.
ಇದರಿಂದ ರೈತರು, ಮಾರುಕಟ್ಟೆಯ ಅನಿಶ್ಚಿತತೆಯ ಅಪಾಯಕ್ಕೆ ಈಡಾಗುವುದನ್ನು ತಡೆಯುತ್ತದೆ ಹಾಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ ಮಾಡಿಕೊಡುತ್ತದೆ.
ಆಧುನಿಕ ತಂತ್ರಜ್ಞಾನ, ಉತ್ತಮ ಬೀಜ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುವು ಮಾಡಿಕೊಡುತ್ತದೆ. ಮಾರುಕಟ್ಟೆ ವೆಚ್ಚ ಕಡಿಮೆ ಮಾಡುವುದರೊಂದಿಗೆ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಕ್ಕೆ ಉತ್ತೇಜನ ದೊರಕುತ್ತದೆ.
ರೈತರು ಮತ್ತು ಖರೀದಿದಾರರ ನಡುವಿನ ವ್ಯಾಜ್ಯ ಪರಿಹಾರಕ್ಕಾಗಿ ಪರಿಣಾಮಕಾರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
3- ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ
ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗೆಡ್ಡೆ ಮುಂತಾದ ವಸ್ತುಗಳನ್ನು ಕೈಬಿಡಲು ಈ ತಿದ್ದುಪಡಿ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ.
ಯುದ್ಧ, ಬರಗಾಲ, ಅಸಾಧಾರಣ ಬೆಲೆ ಏರಿಕೆ ಮತ್ತು ನೈಸರ್ಗಿಕ ವಿಪತ್ತಿನಂಥ ಸಂದರ್ಭಗಳನ್ನು ಹೊರತುಪಡಿಸಿ, ಅಂತಹ ವಸ್ತುಗಳ ಸಂಗ್ರಹದ ಮಿತಿ ಮೇಲೆ ಇರುವ ನಿರ್ಬಂಧವನ್ನು ತೆಗೆದುಹಾಕುತ್ತದೆ.
ಇದರೊಂದಿಗೆ, ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯ ಹಾಗೂ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುತ್ತದೆ.