ರಾಯಚೂರು: ಹುಚ್ಚು ಹಿಡಿದವರಿಗೆ ಇಡೀ ಪ್ರಪಂಚವೇ ಹುಚ್ಚು ಹಿಡಿದಂತೆ ಕಾಣಿಸುತ್ತದೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನಮ್ಮ ಬಗ್ಗೆ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.
ಸಿರವಾರ ಪಟ್ಟಣದಲ್ಲಿ ನಡೆದ ಜನ ಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕೊತ್ವಾಲ್ ರಾಮಚಂದ್ರ ಅಂಥವರನ್ನು ಬಳಸಿಕೊಂಡು ಮೇಲೆ ಬಂದವರು. ಆದರೆ, ನಾವು ಜನರಿಂದ ಬೆಳೆದು ಬಂದಿದ್ದೇವೆ. ಜಲಿಯನ್ ವಾಲಾಬಾಗ್ ಎಂದು ಶುದ್ಧವಾಗಿ ಮಾತನಾಡಲು ತೊದಲುವ ಅವರು ಏನು ಮಾತನಾಡುತ್ತಾರೋ ತಿಳಿಯುವುದಿಲ್ಲ. ತಾಕತ್ತಿದ್ದರೆ ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನವರು ಒಂದೇ ಒಂದು ದೂರು ಕೊಡಿಸಲಿ.
ಆರೋಪಿ ಶ್ರೀಕಿ ವಿರುದ್ಧ ಕೆಫೆ ಗಲಾಟೆ ಪ್ರಕರಣದಲ್ಲಿ 2018ರಲ್ಲಿ ಚಾರ್ಚ್ಶೀಟ್ ಸಲ್ಲಿಸಿದಾಗ ಅ ಧಿಕಾರದಲ್ಲಿದ್ದ ಕಾಂಗ್ರೆಸ್ ಏಕೆ ಬಂಧಿಸಲಿಲ್ಲ. ಆಗ ಏಕೆ ವಿಚಾರಣೆ ಮಾಡಲಿಲ್ಲ. ಈಗ ಬಹಳ ಜೋರಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರೇ ಆಗ ಐಟಿ ಬಿಟಿ ಸಚಿವರಾಗಿದ್ದರು. ಶ್ರೀಕಿಯನ್ನು ಯಾರ್ಯಾರು ಬಳಸಿ ಕೊಂಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.
ಆನ್ಲೈನ್ನಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲ ಮತಗಳು ಒಂದೇ ಕಡೆಯಾಗಿದ್ದವು. ಇದರ ಹಿಂದೆ ಏನೋ ತಂತ್ರಗಾರಿಕೆ ನಡೆದಿದ್ದು, ಶ್ರೀಕಿಯಂಥರನ್ನು ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ನನ್ನ ಬಳಿ ದೂರಿದ್ದಾರೆ. ಶ್ರೀಕಿಯನ್ನು ಕಾಂಗ್ರೆಸ್ ನಾಯಕನ ಪುತ್ರನೇ ಲಕ್ಷ ಲಕ್ಷ ಕೊಟ್ಟು ಫೈವ್ ಸ್ಟಾರ್ ಹೋಟೆಲ್ನಲ್ಲಿಟ್ಟಿದ್ದರು. ಶ್ರೀಕಿ ಮೂಲಕ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಅವರು ದೂರು ಕೊಟ್ಟರೆ ಸಮಗ್ರ ತನಿಖೆ ನಡೆಸಿ ಎಲ್ಲ ವಿಚಾರ ಬಹಿರಂಗ ಪಡಿಸುತ್ತೇವೆ ಎಂದರು.