ಬೆಂಗಳೂರು: ಶುಕ್ರವಾರದಂದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಂತ ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ನಿಧನರಾಗಿದ್ದರು. ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇಂತಹ ಪುನೀತ್ ಸಮಾಧಿ ದರ್ಶನಕ್ಕೆ, ಇಂದಿನಿಂದಲೇ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಪುನೀತ್ ಅವರು ನಿಧನರಾಗಿ ಐದನೇ ದಿನ. ಈ ಹಿನ್ನಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ, ರಾಜ್ ಕುಟುಂಬಸ್ಥರೆಲ್ಲಾ ಸೇರಿ ತೆರಳಿ, 5ನೇ ದಿನದ ಹಾಲು-ತುಪ್ಪ ಕಾರ್ಯವನ್ನು ನೆರವೇರಿಸಿದರು. ಅಪ್ಪುವಿಗೆ ಇಷ್ಟವಾದಂತ ಸಿಹಿತಿನಿಸನ್ನು ಇರಿಸಿ, ಕಾರ್ಯ ಮಾಡಿದರು.
ಈ ಬಳಿಕ ಮಾತನಾಡಿದಂತ ನಟ ರಾಘವೇಂದ್ರ ರಾಜ್ ಕುಮಾರ್ ಅವರು, ಪುನೀತ್ ನಿಧನರಾಗಿಲ್ಲ. ಅವರು ಎಲ್ಲರೊಂದಿಗೂ ಇದ್ದಾರೆ. ಆದ್ರೇ ಆ ದುಖದಲ್ಲೇ ಜೀವನ ಸಾಗಿಸಬೇಕು. ಪುನೀತ್ ಇದ್ದ ಅವಧಿಯಲ್ಲೇ ಎಲ್ಲಾ ಕೆಲಸ ಮಾಡಿ ಹೋಗಿದ್ದಾರೆ ಎಂದು ಹೇಳಿದರು.
ಅಪ್ಪಾಜಿಗೆ ದೇವರು 76 ವರ್ಷ ಕೊಟ್ಟ, ಅಪ್ಪುವಿಗೆ 46 ವರ್ಷ ಕೊಟ್ಟಿದ್ದಾನೆ. ಅಪ್ಪು ಸಾವನ್ನಪ್ಪಿದರೂ ಅವರ ಕಣ್ಣನ್ನು ನಾಲ್ಕು ಜನರಿಗೆ ಕೊಟ್ಟಿದ್ದಾನೆ. ಅಪ್ಪಾಜಿ ಇಬ್ಬರಿಗೆ ಕೊಟ್ಟಿದ್ದರು ಎಂದರು.
ಅಪ್ಪುವಿನ ಮೇಲೆ ಅಭಿಮಾನಿಗಳು ಇಟ್ಟಿರುವಂತ ಅಭಿಮಾನಕ್ಕೆ ಕೃತಜ್ಞತೆಗಳು. ಅಭಿಮಾನಿಗಳಿಂದಲೇ ನಾವು, ಅವರಿಲ್ಲ ಅಂದ್ರೇ ನಾವಿಲ್ಲ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದಲೇ ಇಷ್ಟು ಹೆಸರು ಗಳಿಸೋದಕ್ಕೆ ಆಗಿದ್ದು. ಅಭಿಮಾನಿಗಳಿಗೆ ಇಂದಿನಿಂದಲೇ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು