ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಭೇಟಿ ವೇಳೆ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ರಿಸೈನ್ ಕರ್ನಾಟಕ ಸಿಎಂ’ (#ResignKarnatakaCM) , ‘ಸಿಎಂ ಸಪೋರ್ಟ್ ಮಾರಲ್ ಪೊಲೀಸಿಂಗ್’ (#CMSupportsMoralPolicing) ಹ್ಯಾಷ್ಟ್ಯಾಗ್ನಡಿ ನೀಡುತ್ತಿರುವ ಪ್ರತಿಕ್ರಿಯೆಗಳು ಟ್ರೆಂಡ್ ಆಗಿವೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಹಲವರು ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಅ.13ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. “ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ,” ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದರು.
“ನೈತಿಕ ಪೊಲೀಸ್ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ,” ಎದಿದ್ದರು.
“ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಅನ್ನುವುದು ಸಮಾಜದಲ್ಲಿ ಬೇಕಲ್ವಾ? ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗುತ್ತಾ? ನಾವು ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತದೆ,” ಎಂದೂ ಸಹ ವ್ಯಾಖ್ಯಾನ ಮಾಡಿದ್ದರು.
ಸಿದ್ದರಾಮಯ್ಯ ತರಾಟೆಗೆ:
ಸಿದ್ದರಾಮಯ್ಯ ಟ್ವೀಟ್ ಮಾಡಿ, “ನಾಳೆಯಿಂದ ರಾಜ್ಯದಲ್ಲ ಹೆಣ್ಣುಮಕ್ಕಳ ಮೇಲೆ ಅನೈತಿಕ ಪೊಲೀಸ್ಗಿರಿಯನ್ನು ಯಾರೇ ನಡೆಸಲಿ, ಅವರದ್ದು ಮುಖವಾಡ ಮಾತ್ರ. ಅಸಲಿ ಮುಖ ಅಂತಹ ಕೃತ್ಯಕ್ಕೆ ಪ್ರಚೋದನೆ, ಉತ್ತೇಜನ ಮತ್ತು ರಕ್ಷಣೆ ನೀಡುವ ಕೆಲಸ ನಿಮ್ಮದು ಎಂದು ತಿಳಿದುಕೊಳ್ಳಬಹುದೇ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
#MoralPolicing ಹ್ಯಾಷ್ ಟ್ಯಾಗ್ನಡಿ “ಆಯಕ್ಷನ್ ಗೆ ರಿಯಾಕ್ಷನ್ ಇರುತ್ತದೆ ಎಂದು ಹೇಳುವ ಮೂಲಕ ಯಾವ ಕಾಡಿನ ನ್ಯಾಯವನ್ನು ಪಾಠ ಮಾಡುತ್ತಿದ್ದೀರಿ @BSBommai ಅವರೇ ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ನಿಮ್ಮ ಪರಿವಾರಕ್ಕೆ ಕಾನೂನು ಪಾಲನೆಯ ಕೆಲಸವನ್ನು ವಹಿಸಿಕೊಡುವ ದುಷ್ಟ ಉದ್ದೇಶವೇನಾದರೂ ನಿಮಗೆ ಇದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಾಲತಾಣಗಳಲ್ಲಿ ಟೀಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹೇಳಿಕೆಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕೆ ವ್ಯಕ್ತವಾಗಿದೆ.
“ಮುಖ್ಯಮಂತ್ರಿ ನೈತಿಕ ಪೊಲೀಸ್ಗಿರಿಗೆ ಸಮರ್ಥನೆ ನೀಡುವುದಾದರೆ ಜನಸಾಮಾನ್ಯರ ಕೈಯಿಂದ ಹಣ ತೆಗೆದು ಪೊಲೀಸರಿಗೆ ಸಂಬಳ ನೀಡುವ ಆಗತ್ಯವಿಲ್ಲ” ಎಂದು ಮಹಮದ್ ಫೈಸಲ್ ಉಮಾನ್ ಎಂಬುವರು ಟ್ವೀಟ್ ಮಾಡಿದ್ದಾರೆ.
“ಮುಖ್ಯಮಂತ್ರಿಗೆ ಒಳ್ಳೆಯ ಶಿಕ್ಷಣ ಇದೆ ಎಂದುಕೊಂಡಿದ್ದೆವು. ಆದರೆ, ಅವರು ನಾಗ್ಪುರ ಆರ್ಎಸ್ಎಸ್ ವಿಶ್ವವಿದ್ಯಾಲಯದಲ್ಲಿ ಓದಿದ್ದು ಎಂದು ಈಗ ಗೊತ್ತಾಯಿತು” ಎಂದು ಅಜ್ಮತ್ ಪಾಷಾ ಹೇಳಿದ್ದಾರೆ.
ಸಬಿತ್ ಬಾಜ್ಪೆ ಎಂಬುವರ್ ಟ್ವೀಟ್ ಮಾಡಿ, “ಸ್ವತಃ ಮುಖ್ಯಮಂತ್ರಿಗಳೇ ನೀಡಿರುವ ಹೇಳಿಕೆ ಸಾಕಷ್ಟು ಡ್ಯಾಮೇಜ್ ಉಂಟುಮಾಡಿದೆ. ನೀವು ಮುಖ್ಯಮಂತ್ರಿ ಆಗಿರುವುದು ಕರ್ನಾಟಕ ರಾಜ್ಯಕ್ಕೋ ಅಥವಾ ಬಿಜೆಪಿ ಪಕ್ಷಕ್ಕೋ? ನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸುವ ಮೂಲಕ ಯುವಕರ ಮಧ್ಯೆ ಜಗಳ ಹಚ್ಚುತ್ತಿದ್ದೀರಿ” ಎಂದು ಹೇಳಿದ್ದಾರೆ.
“ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಜವಾಬ್ದಾರಿಯನ್ನು ಆರ್ಎಸ್ಗೆ ವಹಿಸುವ ಉದ್ದೇಶವೇನಾದರೂ ಇದೆಯೇ? ಜಂಗಲ್ ರಾಜ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೀರಾ? ಎಂದು ಶಶಿಗೌಡ ನಿರವಾಣಿ ಎಂಬುವರು ಪ್ರಶ್ನಿಸಿದ್ದಾರೆ.