ನವದೆಹಲಿ, ಸೆ.30- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹುದ್ದೆಯ ಅಳಿವು ಉಳಿವನ್ನು ನಿರ್ಧರಿಸುವ ಭವಾನಿಪುರ ಸೇರಿದಂತೆ ಒಟ್ಟು ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆದಿದೆ. ಪಶ್ಚಿಮಬಂಗಾಳದ ಭವಾನಿಪುರ, ಸಂಸೆರ್ಗಂಜ್, ಜಂಗಿಪುರ್ ಕ್ಷೇತ್ರಗಳು ಒಡಿಸಾ ರಾಜ್ಯದ ಪುರಿ ಜಿಲ್ಲೆಯ ಪಿಪಿಲಿ ವಿಧಾನಸಭಾಕ್ಷೇತ್ರಕ್ಕೆ ಉಪಚುನಾವಣೆಗಳು ನಡೆದಿವೆ.
ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆಯವರೆಗೂ ಮತದಾನ ನಡೆದಿದೆ. ಬೆಳಗ್ಗೆ ಮತದಾನದಲ್ಲಿ ಉತ್ಸಾಹ ಕಂಡು ಬಂದಿದ್ದು, ಜನ ಸಾಲುಗಟ್ಟಿ ಮತ ಚಲಾಯಿಸಿದ್ದಾರೆ. ಪಿಪಿಲಿ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಶೇ.24.7ರಷ್ಟು ದಾಖರ್ಲಾಹ ಮತದಾನವಾಗಿತ್ತು.
ಭವಾನಿಪುರದಲ್ಲಿ ಶೇ.7.57 ಮತದಾನವಾಗಿತ್ತು. ಮಮತಾಬ್ಯಾನರ್ಜಿ ವಿರುದ್ಧ ಬಿಜೆಪಿಯ ಪ್ರಿಯಾಂಕ ತಿಬ್ರೆವಾಲ್, ಸಿಪಿಐ(ಎಂ) ಶ್ರೀಜಿಬ್ ಬಿಸ್ವಾಸ್ ಅವರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲಾರ್ಥವಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಒಟ್ಟು 12 ಮಂದಿ ಕಣದಲ್ಲಿದ್ದಾರೆ.
ಕೊಲ್ಕತ್ತಾದ ದಕ್ಷಿಣ ಭಾಗದಲ್ಲಿರುವ ಈ ಕ್ಷೇತ್ರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ಪರ್ಧೆಯಿಂದ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿದೆ. ಭದ್ರತೆಗಾಗಿ 75 ಕೇಂದ್ರ ಅರೆ ಸೇನಾಪಡೆಯ ತುಕ್ಕಡಿಗಳನ್ನು ನಿಯೋಜಿಸಲಾಗಿತ್ತು. ಮತಗಟ್ಟೆಗಳ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.
ಕೋವಿಡ್ ಮುಂಜಾಗೃತೆಗಾಗಿ ಮತದಾರರಿಗೆ ಪ್ಲಾಸ್ಟಿಕ್ ಗ್ಲೌಸ್ಗಳನ್ನು ಆಯೋಗ ಪೂರೈಸಿದ್ದು, ಅದನ್ನು ಧರಿಸಿ ಮತದಾನ ಮಾಡಿದ್ದಾರೆ. ವ್ಯಕ್ತಿಗತ ಅಂತರ ಹಾಗು ಇತರೆ ಕೋವಿಡ್ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಆದರೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸೋಲುಕಂಡಿದ್ದರು.
ಮುಖ್ಯಮಂತ್ರಿಯಾಗಿ ಅವರು ಮುಂದುವರೆಯಬೇಕಾದರೆ ಆರು ತಿಂಗಳ ಒಳಗೆ ಅವರು ಶಾಸನ ಸಭೆಗೆ ಆಯ್ಕೆಯಾಗುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭವಾಣಿಪುರ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗಿದೆ.