ಚಿಕ್ಕಮಗಳೂರು, ಸೆ.1 ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.
2021 ಮೇ 10ರಂದು ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಅರ್ಜುನ್ ಎಂಬುವರು ಠಾಣಾವ್ಯಾಪ್ತಿಯ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಪ್ರಕರಣವೊಂದರ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆ ತಂದಿದ್ದರು.
ಪಿಎಸ್ಐ ಅರ್ಜುನ್ ಅವರು ದಲಿತ ಯುವಕನ ಮೇಲೆ ಯಾವುದೇ ದೂರು ಇಲ್ಲ ದಿದ್ದರೂ ವಿನಾಃಕಾರಣ ವಿಚಾರಣೆ ನೆಪದಲ್ಲಿ ಯುವಕನನ್ನು ತಲೆಕೆಳಗೆ ಮಾಡಿ ಕಟ್ಟಿಹಾಕಿ ಹಲ್ಲೆ ಮಾಡಿದಲ್ಲದೆ ಠಾಣೆಯಲ್ಲಿದ್ದ ಮತ್ತೊಬ್ಬ ಆರೋಪಿಯಿಂದ ಪುನೀತ್ ಬಾಯಿಗೆ ಮೂತ್ರ ಮಾಡಿಸಿದ್ದರು ಅಲ್ಲದೇ ಜಾತಿನಿಂದನೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ದ್ದರು ಎಂದು ಸಂತ್ರಸ್ಥ ಯುವಕ ಪುನೀತ್ ಪಿಎಸ್ಐ ಅರ್ಜುನ್ ಮೇಲೆ ಆರೋಪ ಹೊರಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು ಬಳಿಕ ರಾಜ್ಯಾದ್ಯಂತ ಪಿಎಸ್ಐ ಅರ್ಜುನ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಪಿಎಸ್ಐ ಅರ್ಜುನ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.
ತನಿಖೆ ಆರಂಭಿಸಿದ ಸಿಐಡಿ ಪೊಲೀಸರು ನಾಲ್ಕು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸದಿರುವ ಬಗ್ಗೆ ಸಂತ್ರಸ್ಥ ಯುವಕ ಪುನೀತ್ ಸೇರಿದಂತೆ ಜಿಲ್ಲೆಯ ದಲಿತಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಸಿಐಡಿ ತನಿಖೆ ಕೈಬಿಟ್ಟು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು.
ಈ ನಡುವೆ ಪ್ರಕರಣ ಆರೋಪಿ ಪಿಎಸ್ಐ ಅರ್ಜುನ್ ಅವರು ಜಿಲ್ಲಾ ನ್ಯಾಯಾಲಯ ದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಅರ್ಜಿ ವಜಾಗೊಂಡಿದ್ದರಿಂದ ಹೈಕೋಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಹೈಕೋರ್ಟ್ನಲ್ಲಿ ಅರ್ಜುನ್ ಸಲ್ಲಿಸಿದ ಜಾಮೀನು ಅರ್ಜಿಯೂ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತಲೆಮರೆಸಿ ಕೊಂಡಿರುವ ಪಿಎಸ್ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬಂಧಿಸುವಲ್ಲಿ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯವಹಿಸಿದ್ದಾರೆ, ಪಿಎಸ್ಐಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೂಡಿಗೆರೆ ತಾಲೂಕಿನ ಬಂದ್ ಕರೆ ನೀಡುವುದಾಗಿ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಬುಧವಾರ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳ ತಂಡ ಪಿಎಸ್ಐ ಅರ್ಜುನ್ ಅವರನ್ನು ಬಂದನಕ್ಕೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.