ಬಾಗಲಕೋಟೆ: ಕುರಿಗಾಹಿ 19 ವರ್ಷದ ಯುವಕ ಬರೋಬ್ಬರಿ 105 ಕೆ.ಜಿ.ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು 1 ಕಿ.ಮೀ.ವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹುಬ್ಬೇರಿಸುವಂತೆ ಮಾಡಿದ್ದಾನೆ.
ಜಿಲ್ಲೆಯ ಬಾದಾಮಿ ತಾಲೂಕಿನ ಕರಡಿಗುಡ್ಡ ಎಸ್.ಎ ಗ್ರಾಮದ 19 ವರ್ಷದ ಕುರಿಗಾಹಿ ಯುವಕ ಆನಂದ್ ಗಳಕ್ಕನವರ್ ವಿಶಿಷ್ಟ ಸಾಧನೆ ಮಾಡಿ ಜನರ ಮನಸ್ಸನ್ನ ಗೆದ್ದಿದ್ದಾರೆ. ಯುವಕ ಬರೋಬ್ಬರಿ 105 ಕೆ.ಜಿ. ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು, ಯಾರ ಸಹಾಯವೂ ಇಲ್ಲದೆ, ದಾರಿಯುದ್ದಕ್ಕೂ ದೀರ್ಘದಂಡ ನಮಸ್ಕಾರ ಹಾಕುತ್ತ ಒಂದು ಕಿಲೋಮೀಟರ್ ವೆರೆಗೂ ಸಾಗಿ ವಿಶಿಷ್ಟ ಸಹಸ ಮಾಡಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಈ ಸಾಹಸದ ಅಭ್ಯಾಸ ಮಾಡಿ, ಈಗ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕುತ್ತ 1 ಕಿಲೋಮೀಟರ್ ವರೆಗೆ ಸಾಗುವ ಸಾಧನೆಗೆ ಪಾತ್ರನಾಗಿದ್ದಾರೆ. ಯುವಕ ಆನಂದ್ ಗಳಕ್ಕನವರ್, ವೃತ್ತಿಯಿಂದ ಗುರಿಗಾಹಿ ಆಗಿದ್ದರಿಂದ ಬಡ ಯುವಕ ಸಾಧನೆ ಪರಿಚಯವಾಗಿಲ್ಲ. ಹೀಗಾಗಿ ಊರಿನ ಗೆಳೆಯರು ಆನಂದ್ ಸಹಾಸದ ವಿಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಅವರ ಸಹಾಸದ ವೀಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಸಾಹಸಿಗ ಆನಂದ್ ಅವರನ್ನು ಸಾಹಸ ಪ್ರದರ್ಶಿಸುವಂತೆ ಹತ್ತಾರು ಹಳ್ಳಿಯ ಜನ ಆಹ್ವಾನಿಸುತ್ತಿದ್ದಾರೆ. ಅಲ್ಲದೆ ಇವರ ಸಾಹಸ ಕಂಡು ಕ್ರೀಡಾಸಕ್ತರು ಸಹಾಯ ಮಾಡಿದರೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಹಳ್ಳಿ ಪ್ರತಿಭೆಗೆ ತರಬೇತಿಯ ಅವಶ್ಯಕತೆ ಇದೆ ಎಂದು ಜನ ಹೇಳಿದ್ದಾರೆ.
ಸಾಹಸ ಮೆರೆಯುವ ಗ್ರಾಮೀಣ ಕ್ರೀಡೆಗಳು ಹಾಗೂ ಯುವ ಜನರ ಭಾರ ಎತ್ತುವ ವಿಶಿಷ್ಟ ಸ್ಪರ್ಧೆಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ಈ ಹಿಂದೆ ಯುವಕರು ಕಲ್ಲು ಎತ್ತುವ ಸ್ಪರ್ಧೆ, ಚೀಲ ಹೊತ್ತು ಸಾಗುವ ಸ್ಪರ್ಧೆ ಸೇರಿದಂತೆ ಅನೇಕ ಸಾಹಸಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಗ್ರಾಮೀಣ ಭಾಗದ ಯುವಜನತೆ ಇಂತಹ ಸಹಾಸಗಳತ್ತ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹಳ್ಳಿ ಭಾಗದಲ್ಲಿ ಇಂತಹ ಸಾಹಸಗಳು ಕಾಣ ಸಿಗುವುದು ಅಪರೂಪವಾಗಿವೆ.