ಬೆಳಗಾವಿ, ಆಗಸ್ಟ್ 20: ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಆದರು ಕಳೆದ 11 ವರ್ಷಗಳಿಂದ ಮೊಹರಂ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.
ಇಂತಹ ಧಾರ್ಮಿಕ ಸಾಮರಸ್ಯ ಕಂಡುಬಂದಿದ್ದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ. ಇಲ್ಲಿ ಧಾರ್ಮಿಕ ಸಾಮರಸ್ಯದ ವಿಶಿಷ್ಟತೆಯನ್ನು ಗುರುತಿಸಬಹುದು. ಇಲ್ಲಿ ಹಿಂದೂ ಕುಟುಂಬಗಳು ನಿಧಿ ಸಂಗ್ರಹಿಸುವ ಮೂಲಕ 11 ವರ್ಷಗಳ ಹಿಂದೆ “ಫಕೀರ್ ಸ್ವಾಮಿ’ ದರ್ಗಾವನ್ನು ನಿರ್ಮಿಸಿದ್ದಾರೆ.
ಪ್ರತಿವರ್ಷ ಹರ್ಲಾಪುರ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು ಸೂಚಿಸುವ ಮೊಹರಂ ಅನ್ನು ಆಚರಿಸುತ್ತಾರೆ. ಸದ್ಯ ಕೋವಿಡ್- 19 ಪರಿಸ್ಥಿತಿಯಿಂದಾಗಿ ಮೊಹರಂ ಉತ್ಸವವು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ.
ಗ್ರಾಮದಲ್ಲಿ ಮೆರವಣಿಗೆ, ವಿಶೇಷ ಪ್ರಾರ್ಥನೆ ಮತ್ತು ಪೂಜೆಯ ನಂತರ ದರ್ಗಾದಲ್ಲಿ ‘ಪಂಜ’ ಸ್ಥಾಪಿಸಲಾಗಿದೆ. ದರ್ಗಾ ಆರಂಭವಾದಾಗಿನಿಂದ ಹಿಂದೂ ಅರ್ಚಕರೇ ಪ್ರತಿದಿನ ಪೂಜೆ ಮಾಡುತ್ತಾರೆ.
ಹಾವಿನ ಕಡಿತಕ್ಕೆ ಚಿಕಿತ್ಸೆ
ಫಕೀರ್ ಸ್ವಾಮಿ ದರ್ಗಾದ ಆವರಣದಲ್ಲಿರುವ ಬೇವಿನ ಮರವು ಹಾವು ಕಡಿತದಿಂದ ಬಳಲುತ್ತಿರುವವರಿಗೆ ಜೀವರಕ್ಷಕ ಎಂದು ನಂಬಲಾಗಿದೆ. ಗ್ರಾಮಸ್ಥರ ಪ್ರಕಾರ, ಬೇವಿನ ಎಲೆಯನ್ನು ಬಳಸಿ ತಯಾರಿಸಿದ ರಸವನ್ನು ಸೇವಿಸಿದ ಎರಡು ಗಂಟೆಗಳಲ್ಲಿ ಹಾವು ಕಡಿತದಿಂದ ಗುಣಮುಖವಾಗುತ್ತಾರೆ. ಬೆಳಗಾವಿಯ ಹೊರತಾಗಿ ಧಾರವಾಡ ಮತ್ತು ಗದಗ ಜಿಲ್ಲೆಗಳಿಂದ ಹಾವು ಕಡಿತಕ್ಕೆ ಒಳಗಾದವರು ಕೂಡ ದರ್ಗಾಗೆ ಭೇಟಿ ನೀಡುತ್ತಾರೆ.
ದರ್ಗಾದ ಅರ್ಚಕ ಗೌಡಪ್ಪ ಅಡಿವೆಪ್ಪ ವಕ್ಕುಂದ್ ಮಾತನಾಡಿ, “”ನಾವು ಅಲ್ಲಾನಲ್ಲಿ ಹೆಚ್ಚಿನ ನಂಬಿಕೆ ಮತ್ತು ಭಕ್ತಿಯನ್ನು ಹೊಂದಿದ್ದೇವೆ ಮತ್ತು ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಪ್ರತಿವರ್ಷ ಮೊಹರಂ ಹಬ್ಬ ಆಚರಿಸುತ್ತೇವೆ. ಈ ವರ್ಷ ನಾವು ಸಮಾಜದ ಒಳಿತಿಗಾಗಿ ಹಾಗೂ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಅಲ್ಲಾ ದೇವರನ್ನು ಪ್ರಾರ್ಥಿಸಿದ್ದೇವೆ, ಎಂದು ಹೇಳಿದರು.
ಇದೇ ವೇಳೆ ಗ್ರಾಮಸ್ಥರಾದ ರವಿ ಚುಲಕಿ ಮಾತನಾಡಿ, “”ಹರ್ಲಾಪುರ ಗ್ರಾಮದಲ್ಲಿ 3,500 ಜನಸಂಖ್ಯೆ ಇದ್ದು, ಹಲವು ದಶಕಗಳಿಂದ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಯಲ್ಲಮ್ಮನ ಗುಡ್ಡದ ಪ್ರಸಿದ್ಧ ರೇಣುಕಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ನಾಲ್ಕು ಕಿ.ಮೀ. ದೂರದಲ್ಲಿರುವ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ದರ್ಗಾಕ್ಕೆ ಭೇಟಿ ನೀಡುವ ಯಾವುದೇ ಭಕ್ತರ ಆಶಯಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಇದೆ,” ಎಂದು ತಿಳಿಸಿದರು.
ಮೊಹರಂ ಮೆರವಣಿಗೆ ವೇಳೆ ಇಬ್ಬರ ಸಾವು
ಮೊಹರಂ ಹಬ್ಬದ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೊಹರಂ ದೇವರನ್ನು ಹೊತ್ತಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತಿದ್ದ ಹುಸೇನ್ ಸಾಬ್ (50) ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆ ಕೆಲ್ಲೂರು ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ ಈ ದುರ್ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಶದಿಂದ ನೆಲಕ್ಕೆ ಬಿದ್ದವರನ್ನು ಲಿಂಗಸಗೂರು ತಾಲೂಕು ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಗದಗದಲ್ಲಿ ಕೋವಿಡ್ ಮಾರ್ಗಸೂಚಿ ಬ್ರೇಕ್
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ನಿನ್ನೆ ರಾತ್ರಿ ಕೋವಿಡ್ ಮಾರ್ಗಸೂಚಿಗಳನ್ನು ಬ್ರೇಕ್ ಮಾಡಿ ಭರ್ಜರಿ ಮೊಹರಂ ಮೆರವಣಿಗೆ ನಡೆಸಲಾಗಿದೆ. ಸರ್ಕಾರದ ನಿಯಮಗಳಿಗೆ ಡೋಂಟ್ ಕೇರ್ ಎಂದ ಹೊಳೆ ಆಲೂರು ಜನ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಪಂಜಾ ಮೆರವಣಿಗೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮಾಯವಾಗಿದೆ. ಸಂಭವನೀಯ ಮೂರನೇ ಅಲೆ ಆತಂಕದ ಮಧ್ಯೆ ಜನರ ನಿರ್ಲಕ್ಷ್ಯ ತೋರಿರುವುದು ಆತಂಕಕಾರಿಯಾಗಿದೆ. ಇನ್ನು ತಾಲೂಕು ಆಡಳಿತ ಅಧಿಕಾರಿಗಳು ಸಹ ಜನ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.