ಬಾಗಲಕೋಟೆ: ಪಂಚಮಿ ಹಬ್ಬ ಕಳೆದು ಮೂರು ನಾಲ್ಕು ದಿನವಾದ್ರು, ನಾಗದೇವತೆಗೆ ಹಾಲೆರೆಯುವ ಕಾರ್ಯ ಮಾತ್ರ ಮುಕ್ತಾಯವಾಗಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ಪಂಚಮಿ ಅಂದ್ರೆ ಹಬ್ಬದ ಮತ್ತೊಂದು ಮುಖ. ವರ್ಷಕ್ಕೊಮ್ಮೆ ಬರುವ ಪಂಚಮಿ ಹಬ್ಬದ ಪ್ರಯುಕ್ತ ವಿವಿಧ ಗ್ರಾಮೀಣ ಕ್ರೀಡೆಗಳು ನಡೆಯುತ್ತಿವೆ. ಆದ್ರೆ ಅದೊಂದು ಹಳ್ಳಿಯ ಟ್ರ್ಯಾಕ್ಟರ್ ಸಾಹಸ ಕ್ರೀಡೆ ಮಾತ್ರ ಎಲ್ಲರ ಗಮನ ಸೆಳೆಯಿತು.
ಕೊರೊನಾ ನಿಯಮಕ್ಕೆ ಬ್ರೇಕ್.. ಟ್ರ್ಯಾಕ್ಟರ್ ಎಕ್ಷಲರೇಟ್ ರೈಜ್
ಟ್ರ್ಯಾಕ್ಟರ್ ಎಂಜಿನ್ಗೆ ಮೂರು ಟ್ರೇಲರ್ ಮರಳು ತುಂಬಿ ಸಾಹಸ
ಅಂದ ಹಾಗೆ ಈ ಸಾಹನ ಕ್ರೀಡೆ ಕಂಡು ಬಂದಿದ್ದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ. ನಾಗರ ಪಂಚಮಿ ಕಳೆದು ಮೂರು ದಿನವಾದ್ರು ಸಂಭ್ರಮದ ವಾತಾವರಣ ಮನೆಮಾಡಿದೆ. ಪ್ರತಿ ಬಾರಿ ಗ್ರಾಮದ ಮನರಂಜನೆಗಾಗಿ ಮರಳು ತುಂಬಿದ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಒಂದು ಟ್ರ್ಯಾಕ್ಟರ್ ಎಂಜಿನ್ಗೆ ಮೂರು ಟ್ರೇಲರ್ ಕಟ್ಟಿ ಓಡಿಸುವ ಸ್ಪರ್ಧೆ ಇದು. ಒಂದು ಟ್ರೇಲರ್ನಲ್ಲಿ ಹದಿನೈದು ಟನ್ನಂತೆ ಒಟ್ಟು 45ಟನ್ ಮರಳು ತುಂಬಿ ಓಡಿಸಲಾಗುತ್ತದೆ.
ಮರಳು ತುಂಬಿ ಸಾಗುತ್ತಿದ್ದ ಟ್ರೇಲರ್ ಎಳೆಯಲಾಗದೆ ಎಂಜಿನ್ ಮೇಲೆ ಹಾರುತ್ತಿದ್ದರೆ, ಜನರು ಟ್ರ್ಯಾಕ್ಟರ್ ಓಟ ಕಂಡು ಕೇಕೆ ಹಾಕುತ್ತಿದ್ದರು. ತುಳಸಿಗೇರಿ ಗ್ರಾಮದ ಗೆಳೆಯರ ಬಳಗದಿಂದ ಆಯೋಜಿಸಿದ ಈ ವಿಭಿನ್ನ ಸ್ಪರ್ಧೆಗೆ ಮೊದಲ ಬಹುಮಾನ 10 ಸಾವಿರ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ನಿಗದಿ ಮಾಡಲಾಗಿತ್ತು.
ಒಂದು ಟ್ರೇಲರ್ ಮರಳು ಎಳೆಯೋದೆ ಕಷ್ಟ. ಅಂತದ್ದರಲ್ಲಿ ಮೂರು ಟ್ರೇಲರ್ ಮರಳು ತುಂಬಿದ ಟ್ರ್ಯಾಕ್ಟರ್ ಚಲಿಸೋದು ಅಂದ್ರೆ ಸ್ಪರ್ಧೆ ಹೇಗಿರಬೇಡ.. ಬರೀ ಮೊಬೈಲ್ ಗೇಮ್ನಲ್ಲೇ ಕಾಲ ಕಳೆಯುವ ಈ ದಿನಮಾನದಲ್ಲಿ ಗ್ರಾಮಸ್ಥರ ಈ ಕ್ರೀಡೆ ಆಯೋಜನೆ ಸಂತಸ ಇಮ್ಮಡಿಗೊಳಿಸ್ತು.
ಆದರೆ ಸ್ಪರ್ಧೆ ಭರಾಟೆಯಲ್ಲಿ ಕೋವಿಡ್ ನಿಯಮ ಎಲ್ಲವನ್ನೂ ಗಾಳಿಗೆ ತೂರಿದ್ದು ಮಾತ್ರ ವಿಪರ್ಯಾಸ. ಒಟ್ಟಾರೆ ಪಂಚಮಿ ಹಬ್ಬದ ಪ್ರಯುಕ್ತ ಹಲವು ಕ್ರೀಡೆಗಳು ಗಮನ ಸೆಳೆದವು. ಆದ್ರೆ, ಇದರಲ್ಲಿ ಟ್ರ್ಯಾಕ್ಟರ್ ಸ್ಪರ್ಧೆ ಯುವಕರ, ಮಕ್ಕಳ ಗಮನ ಸೆಳೆಯೋದರ ಜೊತೆಗೆ ರೋಮಾಂಚನವಾಗಿತ್ತು.