ಬೆಂಗಳೂರು: ಕೇಂದ್ರ ಸರ್ಕಾರ ‘ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ’ಯ ಹೆಸರನ್ನು ಬದಲಿಸಿ ‘ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ’ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ, ‘ಕರ್ನಾಟಕದಲ್ಲೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸಿಟಿ ರವಿ ಅವರು ಇಂದು ಟ್ವೀಟ್ ಮಾಡಿದ್ದು, ‘ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ, ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಘೋಷಣೆ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದಾರೆ.
‘ಕನ್ನಡಿಗರು ಊಟ ಮಾಡುವಾಗ ಏಕೆ ಇಂದಿರಾ ಗಾಂಧಿ ಅವರ ಹೆಸರಿನ ಮೂಲಕ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳಬೇಕು’? ಎಂದು ಪ್ರಶ್ನಿಸಿದ್ದಾರೆ. ‘ಮುಖ್ಯಮಂತ್ರಿಯವರು ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಪರ ವಿರೋಧದ ಚರ್ಚೆ ನಡೆದಿದ್ದು, ಕೆಲವರು ಸಿಟಿ ರವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು, ‘ಹಾಗಾದರೇ ಕರ್ನಾಟಕದ ಯೋಜನೆಗಳಿಗೆ ಇಟ್ಟಿರುವ ವಾಜಪೇಯಿ, ಸಾವರ್ಕರ್ ಅವರ ಹೆಸರನ್ನೂ ಬದಲಾವಣೆ ಮಾಡಿ’ ಎಂದು ಸವಾಲು ಎಸೆದಿದ್ದಾರೆ. ಈ ಮೂಲಕ ಸಿಟಿ ರವಿ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.