ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಊಟ, ನಿದ್ರೆ, ಬಿಸಿ ನೀರು ಸೇವನೆ ಸೇರಿದಂತೆ ಉತ್ತಮ ದಿನಚರಿ ಅಳವಡಿಸಿಕೊಂಡರೆ ಕರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಸೋಂಕಿತರು ಬೇಗ ಗುಣ ಹೊಂದಬಹುದು..
ಇದು ಕರೊನಾ ಗೆದ್ದು ಬಂದ ಇಲ್ಲಿನ ಘಂಟಿಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ ಅವರ ಅನುಭವದ ಮಾತು. ಜು. 15ರಂದು ಸೋಂಕು ಪತ್ತೆಯಾಗಿ ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಬಿಡುಗಡೆಯಾಗಿದ್ದಾರೆ.
24 ಗಂಟೆ ಕರೊನಾ ಸ್ಮರಣೆ ಮಾಡದೇ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅದನ್ನು ಮೀರಿ ಸೋಂಕು ಪತ್ತೆಯಾದರೆ ಧೈರ್ಯಗೆಡದೆ ಎದುರಿಸಬೇಕು. ವೈದ್ಯರ ಸಲಹೆ, ಸೂಚನೆ ಪಾಲಿಸಿದರೆ ನಾಲ್ಕೈದು ದಿನದಲ್ಲಿ ಸೋಂಕು ಮಾಯವಾಗುತ್ತದೆ.
ನಾನು ನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಉಪ್ಪು ಮಿಶ್ರಿತ ನೀರಿನಲ್ಲಿ ಬಾಯಿ ಮುಕ್ಕಳಿಸುತ್ತಿದ್ದೆ. ನಿಂಬೆ ಹಣ್ಣು ಮಿಶ್ರಣದ ಬಿಸಿ ನೀರು ಕುಡಿದು ಪ್ರಾಣಾಯಾಮ, ಯೋಗಾಸನ ಮಾಡುತ್ತಿದ್ದೆ. ಸಮಯಕ್ಕೆ ಸರಿಯಾಗಿ ಉಪಾಹಾರ, ಊಟ ಸೇವಿಸಿ ದಿನಕ್ಕೆ ಕನಿಷ್ಠ 7ರಿಂದ 8 ತಾಸು ನಿದ್ರಿಸುತ್ತಿದ್ದೆ. ಇದರ ಜತೆಗೆ ಮನಸಿಗೆ ಮುದ ನೀಡುವ ಪುಸ್ತಕಗಳನ್ನು ಓದುವ ಮೂಲಕ ಕಾಲ ಕಳೆದೆ. ಇದರಿಂದಾಗಿ ನಾನು ಒಂದು ವಾರದೊಳಗೆ ಕರೊನಾ ವೈರಸ್ ವಿರುದ್ಧ ಗೆಲುವು ಸಾಧಿಸಿದೆ ಎನ್ನುತ್ತಾರೆ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ.
ಕಸಬಾಪೇಟೆಯ 7 ಸಿಬ್ಬಂದಿ ಬಿಡುಗಡೆ: ಬೈಕ್ ಕಳ್ಳನಿಂದ ಕಸಬಾಪೇಟೆಯ 20 ಸಿಬ್ಬಂದಿಗೆ ಸೋಂಕು ತಗಲುವ ಮೂಲಕ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಬುಧವಾರ 7 ಅಧಿಕಾರಿ ಮತ್ತು ಸಿಬ್ಬಂದಿ ಬಿಡುಗಡೆಯಾಗುವ ಮೂಲಕ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ 10 ಸಿಬ್ಬಂದಿ ಬಿಡುಗಡೆಯಾಗಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
.
ಆಯುಕ್ತರ ಕಚೇರಿಗೂ ಕಾಲಿಟ್ಟ ಕರೊನಾ: ಇಲ್ಲಿನ ನವನಗರದ ಹು-ಧಾ ಪೊಲೀಸ್ ಆಯುಕ್ತರ ಕಚೇರಿಯ ಓರ್ವ ಕಾನ್ಸ್ಟೇಬಲ್ಗೆ ಸೋಂಕು ದೃಢಪಟ್ಟಿದೆ. ಸಿಟಿ ಸ್ಪೆಷಲ್ ಬ್ರ್ಯಾಂಚ್ನ 24 ವರ್ಷದ ಕಾನ್ಸ್ಟೇಬಲ್ಗೆ ಸೋಂಕು ಕಾಣಿಸಿಕೊಂಡಿದೆ. ಕಳೆದ ವಾರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಕಾನ್ಸ್ಟೇಬಲ್ ಬುಧವಾರ ಬಿಡುಗಡೆಯಾಗಿದ್ದಾರೆ.