ಬೆಳಗಾವಿ – ಆ ವೃದ್ದೆಯರ ಕೈ ನಡುಗುತ್ತಿತ್ತು. ಆದರೂ ಮನೆ ಮಗಳ ತಲೆಯ ಮೇಲೆ ಕೈಯಿಟ್ಟು ಹರಸುತ್ತಿದ್ದರು. ತಾಯಂದಿರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು, ಮನೆಮಗಳನ್ನು ಬಿಗಿದಪ್ಪಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಹಿರಿಯರು, ಯುವಕರ ಮುಖದಲ್ಲಿ ತಾವು ನೀಡಿದ ಒಂದೊಂದು ಓಟು ನಿಜವಾಗಿಯೂ ಸಾರ್ಥಕವಾದ ಧನ್ಯತಾಭಾವ ಕಾಣುತ್ತಿತ್ತು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಿಜಾರ್ಥದಲ್ಲಿ ಶಿವ-ಬಸವ ಜಯಂತಿ ಆಚರಿಸಲ್ಪಟ್ಟಿತು. ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಮ್ಮೆ ಮನೆ ಮಗಳಾಗಿ ಕ್ಷೇತ್ರದ ಜನರ ಅನ್ನದ ಹಸಿವು ಇಂಗಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ಹಿಂದೆ ಪ್ರವಾಹದಿಂದ ಕೊಚ್ಚಿಹೋಗಿದ್ದ ಸಂದರ್ಭದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಏನು ಮಾಡಬಹುದು, ಏನು ಮಾಡಬೇಕು ಎನ್ನುವುದನ್ನು ಅಕ್ಷರಶಃ ಮಾಡಿ ತೋರಿಸಿದ್ದ ಲಕ್ಷ್ಮಿ ಹೆಬ್ಬಾಳಕರ್, ಈಗ ಕೊರೋನಾ ಸಂಕಷ್ಟದಲ್ಲಿ ಮತ್ತೊಮ್ಮೆ ಕ್ಷೇತ್ರದ ಜನರ ಸೇವೆಯಲ್ಲಿ ನಿಂತಿದ್ದಾರೆ
ಕಳೆದ ಒಂದು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ, ಲಾಕ್ ಡೌನ್ ನಿಂದಾಗಿ ನಲುಗಿಹೋಗಿರುವ ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈಗ ಇನ್ನೊಂದು ಹೆಜ್ಜೆ ಮುಂದೆಹೋಗಿದ್ದಾರೆ.
ಕೊರೋನಾ ಮಾರಕ ರೋಗ ಎನ್ನುವುದು ಗೊತ್ತಿದ್ದರೂ ಸ್ವಲ್ಪವೂ ಅಂಜದೆ ಕ್ಷೇತ್ರದಲ್ಲೇ ಸುತ್ತಾಡುತ್ತಿರುವ ಶಾಸಕಿ, ಈವರೆಗೆ ಔಷಧ ಸಿಂಪರಣೆ, ಮಾಸ್ಕ್ ವಿತರಣೆ, ಸೆನಿಟೈಸರ್ ವಿತರಣೆ ಮತ್ತಿತರ ಕೆಲಸ ಪೂರೈಸಿ ಈಗ ದೊಡ್ಡ ಪ್ರಮಾಣದಲ್ಲಿ ಮನೆ ಮನೆಗೆ ದಿನಸಿ, ಹಾಲು ವಿತರಿಸುವ ಕಾರ್ಯಕೈಗೊಂಡಿದ್ದಾರೆ
ಈ ಹಿಂದೆಯೂ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಅನೇಕ ಹಳ್ಳಿಗಳಿಗೆ ಹಾಲು, ದಿನಸಿ ವಿತರಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತವರ ತಂಡ, ಇಂದು ಅದರ ಮುಂದುವರಿದ ಭಾಗವಾಗಿ 3 ಸಾವಿರಕ್ಕಿಂತ ಹೆಚ್ಚು ಕಿಟ್ ಗಳನ್ನು ಹಂಚಿದರು. ಆಶ್ರಯ ಕಾಲನಿ, ಸಾರಥಿ ನಗರ ಸೇರಿದಂತೆ ಪೂರ್ಣ ಸಹ್ಯಾದ್ರಿ ನಗರ, ಕ್ರಾಂತಿನಗರ, ಬ್ರಹ್ಮಲಿಂಗ ಕಾಲನಿ, ಜ್ಯೋತಿ ನಗರ ಸೇರಿದಂತೆ ಗಣೇಶ ನಗರ ಪ್ರದೇಶ, ದೇಸೂರ್- ಕಮಲ್ ನಗರ ಪ್ರದೇಶಗಳಲ್ಲಿ ಆಹಾರ ಸಾಮಗ್ರಿಗಳ ಕಿಟ್ ಮತ್ತು ಹಾಲು ವಿತರಿಸಿದರು
ಸ್ವತಃ ಲಕ್ಷ್ಮಿ ಹೆಬ್ಬಾಳಕರ್, ಸಹೋದರ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ್ ಹೆಬ್ಬಾಳಕರ್ ಸಂಪೂರ್ಣ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು. ಹಲವಾರು ಕಾರ್ಯಕರ್ತರೂ ಭಾಗಿಯಾಗಿ ಮನೆ ಮನೆಗೆ ಸಾಮಗ್ರಿಗಳನ್ನು ಹಂಚಿದರು.
ಹಸಿದವರಿಗೆ ದಾಸೋಹ ನೀಡುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದಲ್ಲಿ ಶಿವ ಜಯಂತಿ, ಬಸವ ಜಯಂತಿ ಆಚರಿಸಿ ಸಾರ್ಥಕತೆ ಮೆರೆದರು. ಕ್ಷೇತ್ರದ ಜನರು ಇದೇ ಮೊದಲ ಬಾರಿಗೆ ಶಾಸಕರು ಹೀಗೂ ಇರುತ್ತಾರಾ ಎಂದು ಮೂಗಿನಮೇಲೆ ಬೆರಳಿಡುವಂತಾಯಿತು.