ನಿಪ್ಪಾಣಿ: ’ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು ಕಂಡುಬಂದಿದ್ದಾರೆ. ಕೇವಲ ರಾಯಬಾಗ ತಾಲ್ಲೂಕಿನಲ್ಲಿ ೧೮ ಜನರು ಮತ್ತು ಹುಕ್ಕೇರಿ ತಾಲ್ಲೂಕಿನಲ್ಲಿ ಒಬ್ಬರು ಒಳಗೊಂಡಿದ್ದಾರೆ. ಇತರೆ ತಾಲ್ಲೂಕುಗಳಲ್ಲಿ ಒಬ್ಬರೂ ಸೋಂಕಿತರು ಇಲ್ಲ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೨೩೪ ಜನರು ವಿದೇಶದಿಂದ, ೧೫೮೭೯ ಜನರು ಪರರಾಜ್ಯದಿಂದ ಮತ್ತು ೧೦೭೧೮ ಜನರು ಹೊರಜಿಲ್ಲೆಗಳಿಂದ ಬಂದಿದ್ದು ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.
ಇಲ್ಲಿನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ’೪೪ ಸಾವಿರ ಜನಸಂಖ್ಯೆ ಇರುವ ಕುಡಚಿ ಪಟ್ಟಣದಲ್ಲಿ ೭೭ ತಂಡಗಳನ್ನು ರಚಿಸಿ ಸುಮಾರು ೮,೧೭೧ ಮನೆಗಳಲ್ಲಿ ತಪಾಸಣೆ ನಡೆಸಲಾಯಿತು. ೨೪೩ ಜನರ ಗಂಟಲು ದ್ರವವನ್ನು ಪರೀಕ್ಷೆಗೊಳಿಸಲಾಗಿದೆ. ಕುಡಚಿ, ಹಾರೂಗೇರಿ, ಚಿಂಚಣಿ, ರಾಯಬಾಗದಲ್ಲಿಯ ೧೩೧ ಜನರು ಸರಕಾರಿ ಕ್ವಾರಂಟೈನ್ನಲ್ಲಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ೧೩೨ ಹಾಗೂ ಪರೋಕ್ಷವಾಗಿ ಸಂಪರ್ಕಕ್ಕೆ ಬಂದ ೩೯೬ ಜನರನ್ನು ಕ್ವಾರಂಟೈನ್ನಲ್ಲಿದ್ದಾರೆ. ಸಂಕೇಶ್ವರದಲ್ಲಿ ಪ್ರಾಥಮಿಕವಾಗಿ ಸಂಪರ್ಕಕ್ಕೆ ಬಂದ ೨೧ ಜನರನ್ನು ಮತ್ತು ಪರೋಕ್ಷವಾಗಿ ಸಂಪರ್ಕಕ್ಕೆ ಬಂದ ೬೨ ಜನರನ್ನು ಸರಕಾರಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಸ್ಥಳೀಯ ನಗರದಲ್ಲಿ ೧೪ ಜನರನ್ನು ಸರಕಾರಿ ಕ್ವಾರಂಟೈನ್ನಲ್ಲಿಡಲಾಗಿದೆ’ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ’ಸ್ಥಳೀಯ ತಾಲ್ಲೂಕಿನ ೨೭ ಗ್ರಾಮ ಪಂಚಾಯ್ತಿಗಳಿಗೆ ಥರ್ಮಲ್ ಸ್ಕ್ಯಾನರ್ಗಳನ್ನು ಸರಕಾರವು ವಿತರಿಸಿದೆ. ನಗರದಲ್ಲಿ ಎಲ್ಲ ಅಂಗಡಿಗಳಲ್ಲಿ ನೇರ ಮಾರಾಟ ನಡೆಸದೆ ಹೋಮ್ ಡೆಲಿವರಿ ಮೂಲಕ ಅಗತ್ಯ ವಸ್ತುಗಳ ಮಾರಾಟ ನಡೆಸಲಾಗುತ್ತಿದೆ. ಸಧ್ಯಕ್ಕೆ ಇದನ್ನು ಬದಲಾಯಿಸುವ ಯಾವುದೆ ವಿಚಾರವಿಲ್ಲ, ನಾಗರಿಕರಿಂದ ಆಕ್ಷೇಪಗಳು ಕಂಡು ಬಂದಲ್ಲಿ ವಿಚಾರ ಮಾಡಲಾಗುವುದು’ ಎಂದು ಹೇಳಿದರು.