ಬೆಳಗಾವಿ : ಕಳೆದ ನಾಲ್ಕೈದು ದಿನದ ವರದಿ ಪ್ರಕಾರ ರಾಜ್ಯದಲ್ಲಿ ಮಳೆಯಿಂದ ಸುಮಾರು 3000 ಕೋಟಿ ರು. ಹಾನಿಯಾಗಿದೆ. 10 ಜನ, ನೂರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದು, ಸುಮಾರು 8 ಸಾವಿರ ಜನರು ಪರಿಹಾರ ಕೇಂದ್ರದಲ್ಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊರೋನಾ ಇರುವುದರಿಂದ ಅಲ್ಲಿರುವವರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಕೊರೋನಾ ಹಾಗೂ ಪ್ರವಾಹ ಸವಾಲಿನ ಪ್ರಶ್ನೆಯಾಗಿದೆ. ಇದನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಯಾವುದೇ ರೀತಿಯ ಹಣದ ಕೊರತೆ ಬರದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಚಹಾ…!
ಬೆಳಗಾವಿ ಜಿಲ್ಲಾಧಿಕಾರಿ ಖಾತೆಯಲ್ಲಿ 88 ಕೋಟಿ ರು. ಹಣ ಇದೆ. ಅದು ಎಲ್ಲ ತಾಲೂಕಿಗೂ ಸಂಬಂಧಿಸಿದ್ದು, ಖಚಿತವಾಗಿ ಯಾವ ತಾಲೂಕಿಗೆ ಬೇಕೆಂದು ಹೇಳಿದರೆ ಹಣ ಬಿಡುಗಡೆ ಮಾಡಲಾಗುವುದು. ಅಲ್ಲದೆ ಕಲಬುರಗಿಯಲ್ಲಿ 20 ಕೋಟಿ ರು., ಯಾದಗಿರಿಯಲ್ಲಿ 16 ಕೋಟಿ ರು., ಬಾಗಲಕೋಟೆಯಲ್ಲಿ 33 ಕೋಟಿ ರು., ಕೊಡಗಿನಲ್ಲಿ 68 ಕೋಟಿ ರು. ಹಣ ಇದೆ. ನಾನು ಕಂದಾಯ ಸಚಿವನಾದ ಮೇಲೆ ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿ ಹಣ ಆದ ಮೇಲೆ ಪತ್ರ ಬರೆಯುತ್ತಿದ್ದರು. ಆ ಹಣ ಕಳುಹಿಸಿಕೊಡಲು ನಾಲ್ಕೈದು ತಿಂಗಳು ಆಗುತ್ತಿತ್ತು. ಆದರೆ ಈಗ ಹಾಗೆ ಆಗೋಲ್ಲ . 5 ಕೋಟಿಗಿಂತ ಕಡಿಮೆ ಇರುವ ಯಾವ ಯಾವ ಜಿಲ್ಲೆಯಲ್ಲಿ ಯಾವುದೇ ಡಿಸಿಯ ಅನುಮತಿ ಕೇಳದೆ ನಾವೇ ಹಣ ನೀಡುತ್ತೇವೆ. ಒಟ್ಟು 666 ಕೋಟಿ ಹಣ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಹಣದ ಅಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮಳೆಯಿಂದ ಹಾನಿಯಾದ ಜಿಲ್ಲೆಗಳಿಗೆ ಸತತವಾಗಿ ಭೇಟಿ ನೀಡುತ್ತಿದ್ದೇನೆ. ಇತ್ತೀಚೆಗೆ ಕಲಬುರಗಿ ಮತ್ತು ಯಾದಗಿರಿಗೆ ಭೇಟಿ ಮಾಡಿ ಅಲ್ಲಿ ಪರಿಹಾರ ನೀಡುವುದನ್ನು ಚುರುಕಾಗಿ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರವಾಹದಲ್ಲಿ ನೊಂದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಅದನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿಯೇ ಮಾಡುತ್ತದೆ. ಪರಿಹಾರ ಕಾರ್ಯ ಚುರುಕುಗೊಳಿಸಲು ನಾನು ಬಂದಿದ್ದೇನೆ. ಅಧಿಕಾರಿಗಳಿಗೂ ಸೂಚಿಸುತ್ತೇನೆ. ಯಾವುದೇ ಕಾರಣಕ್ಕೂ ಸೋಮಾರಿತನ ಮಾಡದೆ ನೊಂದವರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ತಿಳಿಸಿದ್ದೇನೆ ಎಂದರು.
ಪರಿಹಾರ ಕೇಂದ್ರದಲ್ಲಿರುವ ಜನರಿಗೆ ಗುಣಮಟ್ಟದ ಆಹಾರ ನೀಡಬೇಕೆಂದು ಮಾನದಂಡ ನಿಗದಿ ಮಾಡಿದ್ದೇನೆ. ಕೆಲವು ಪರಿಹಾರ ಕೇಂದ್ರದಲ್ಲಿ ಜಾತಿ ತಾರತಮ್ಯ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥದ್ದು ಯಾರು ಮಾಡುತ್ತಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಪರಿಹಾರ ಕೇಂದ್ರದಲ್ಲಿರುವ ಎಲ್ಲರಿಗೂ ಸಮಾನ ರೀತಿಯಲ್ಲಿ ನೋಡಿಕೊಳ್ಳಬೇಕು. ಅಲ್ಲದೆ, ಅವರಿಗೆ ಪೌಷ್ಟಿಕ ಆಹಾರ ನೀಡಬೇಕೆಂದು ಸರ್ಕಾರದ ಕಟ್ಟುನಿಟ್ಟಿನ ಆದೇಶ. ಇದನ್ನು ಉಲ್ಲಂಘಿಸಿದ ಅಧಿಕಾರಿಗಳಿಗೆ ಮುಲಾಜಿಲ್ಲದೆ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.
ಕೊರೋನಾ ನಿರ್ವಹಣೆಗಾಗಿ ನೀಡಿರುವ ಅನುದಾನದಲ್ಲಿ ರಾಯಬಾಗ ತಹಸೀಲ್ದಾರ್ ಹಾಗೂ ಕೋವಿಡ್ 19ನಲ್ಲಿ ಅವ್ಯವಹಾರ ಮಾಡುವುದು ದೇವರಿಗೆ ಮೋಸ ಮಾಡಿದ ಹಾಗೆ. ಅಂಥ ವ್ಯಕ್ತಿಗಳು ಯಾರೇ ಇದ್ದರೂ ಒಂದು ನಿಮಿಷ ಕೆಲಸದಲ್ಲಿರಲು ಅವನು ನಾಲಾಯಕ. ಅಂಥವರನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
-ಆರ್.ಅಶೋಕ, ಕಂದಾಯ ಸಚಿವ