ಬೆಂಗಳೂರು/ಉಡುಪಿ/ಬೆಳಗಾವಿ : ರಾಜ್ಯದಲ್ಲಿ ಮಳೆರಾಯನ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಘಟ್ಟಪ್ರದೇಶಗಳಲ್ಲಿ ಈಗಲೂ ಧಾರಾಕಾರ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆ ಕಾರ್ಕಳದ ಕೆರ್ವಾಶೆ ಬಳಿ ಅತ್ಯಧಿಕ 208.5 ಮಿಮೀ ನಷ್ಟು ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಇದು ರಾಜ್ಯದಲ್ಲೇ ಅತ್ಯಂತ ಹೆಚ್ಚು ಮಳೆಯಾದ ಪ್ರದೇಶವಾಗಿದೆ.
ಇನ್ನು ಇತ್ತ ಬೆಳಗಾವಿಯ ಪಶ್ಚಿಮಘಟ್ಟದಲ್ಲೂ ಮಳೆ ಮುಂದುವರಿದಿದೆ. ಖಾನಾಪುರ, ಬೆಳಗಾವಿ ತಾಲೂಕುಗಳಲ್ಲಿ ಮಳೆ ಸುರಿಯುತ್ತಿದ್ದು, ಮಾರ್ಕಂಡೇಯ ನದಿಯಲ್ಲಿ ನೀರಿನ ಮಟ್ಟ ಯಥಾ ಪ್ರಕಾರ ಮುಂದುವರಿದಿದೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಂಬೋಲಿ ಘಾಟ್ ನಲ್ಲಿ ಹುಟ್ಟುವ ಘಟಪ್ರಭಾ ನದಿ ಪ್ರದೇಶದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಹಿಡಕಲ್ ಜಲಾಶಯಕ್ಕೆ ಬರೊಬ್ಬರಿ ಒಂದೇ ದಿನ ಸುಮಾರು 4 ಟಿಎಂಸಿ ಹರಿದು ಬಂದಿದೆ.
ಆದರೆ ಸದ್ಯಕ್ಕೆ ಹೆಚ್ಚುವರಿ ನೀರನ್ನು ನದಿಗೆ ಇನ್ನೂ ಹರಿಬಿಟ್ಟಿಲ್ಲ.
ಘಟಪ್ರಭಾ ಜಲಾಶಯದ ( ಹಿಡಕಲ್ ಆಣೆಕಟ್ಟು-ರಾಜಾ ಲಖಮ್ ಗೌಡ್ ಜಲಾಶಯ) ವಿವರ
ಶುಕ್ರವಾರ ನೀರಿನ ಮಟ್ಟ ಶನಿವಾರದ ನೀರಿನ ಮಟ್ಟ ಒಟ್ಟು ಸಾಮರ್ಥ್ಯ
37.96 ಟಿಎಂಸಿ 41.98 ಟಿಎಂಸಿ 51 ಟಿಎಂಸಿ
ಸದ್ಯ ಜಲಾಶಯಕ್ಕೆ 46 ಸಾವಿರ ಕ್ಯೂಸೆಕ್ ಗೂ ಅಧಿಕ ನೀರಿನ ಒಳಹರಿವಿದೆ. ಆದರೆ ಅಂಬೋಲಿ ಘಟ್ಟದಲ್ಲಿ ಮಳೆ ಕೊಂಚ ತಗ್ಗಿದ ಕಾರಣ ಒಳಹರಿವು ಕುಸಿಯುವ ಸಾಧ್ಯತೆ ಇದೆ. ಶೇ.82 ರಷ್ಟು ಜಲಾಶಯ ಭರ್ತಿಯಾಗಿದ್ದು, 130 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗುತ್ತಿದೆ.