ಬೆಂಗಳೂರು : ಮನೆಯಲ್ಲಿ ಗರ್ಭಿಣಿ ಪತ್ನಿಯಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪೋಷಕರು ಇದ್ದಾರೆ. ಅವರನ್ನು ಉಳಿಸಿಕೊಳ್ಳಲು ಕಚೇರಿ ಕರ್ತವ್ಯಕ್ಕೆ ಧಕ್ಕೆಯಾಗದಂತೆ ರಾತ್ರಿ ಪಾಳಿಯಲ್ಲಿ ಅಲ್ಪಾವಧಿ ಕೆಲಸ ಮಾಡಲು ಅನುಮತಿ ನೀಡುವಂತೆ ನೊಂದಣಿ ಮತ್ತು ಮುದ್ರಣಾಂಕ ಶಾಖೆಯ ಆಡಿಟ್ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರೊಬ್ಬರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಪತ್ರದಿಂದಾಗಿ ರಾಜ್ಯ ಸರ್ಕಾರಿ ನೌಕರರ ಪರಿಸ್ಥಿತಿ ಮನ ಮಿಡಿಯುವಂತಾಗಿದೆ.
ರಾಜ್ಯ ಸರ್ಕಾರದ ನೊಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾದಂತ ಕೆ ಪಿ ಮೋಹನ್ ರಾವ್ ಅವರಿಗೆ ಕೇಂದ್ರ ಕಛೇರಿಯ ಆಡಿಟ್ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮೊಹಿನುದ್ದೀನ್ ಎಂಬುವರು ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ 2019ರಿಂದ ಆಡಿಡ್ ಶಾಖೆಯಲ್ಲಿ ವಿಷಯ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸೇವೆಗೆ ಸೇರಿದಾಗಿನಿಂದ ಇಲ್ಲಿಯವರೆಗೆ ಸುಮಾರು 8 ತಿಂಗಳು ಅವಧಿಗೆ ( ಡಿಸೆಂಬರ್-2019) ಸರ್ಕಾವು ವೇತನ ನೀಡಿರುವುದಿಲ್ಲ.
ನನ್ನ ಪತ್ನಿ ಹಾಗೂ ತಂದೆ, ತಾಯಿ, ಅರ್ಜಿ ಮತ್ತು ಇಬ್ಬರು ಅವಿವಾಹಿತ ಸಹೋದರರು ನನ್ನ ಅವಲಂಬಿತರಾಗಿರುತ್ತಾದೆ. ನನ್ನ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಪ್ರತಿ ತಿಂಗಳು ತಾಯಿ-ಮಗುವಿನ ಆರೋಗ್ಯ ಸ್ಥಿತಿ ಪರೀಕ್ಷೆ ಮಾಡಿಸಬೇಕಿದ್ದು, ತಂದೆ ಹಾಗೂ ಅಜ್ಜಿ ವಯೋಸಹಜ ಅನಾರೋಗ್ಯ ಸಮಸ್ಯೆ ಹೊಂದಿದ್ದು, ಅವರ ವೈದ್ಯಕೀಯ ವೆಚ್ಚ ಹಾಗೂ ಕುಟುಂಬ ನಿರ್ವಹಣೆಯ ಹೊಣೆ ನನ್ನ ಮೇಲೆ ಇರುತ್ತದೆ.
ನನ್ನ ಕುಟುಂಬವು ಸಂಪೂರ್ಣವಾಗಿ ನನ್ನ ವೇತನದ ಮೇಲೆಯೆ ಅವಲಂಬಿತವಾಗಿದ್ದು, ಬೇರೆ ಯಾವುದೇ ಆದಾಯವನ್ನು ಹೊಂದಿಲ್ಲ. ಆದರೇ ನನಗೆ ಸತತ 8 ತಿಂಗಳಿಂದ (ಡಿಸೆಂಬರ್-2019 ರಿಂದ ಇಲ್ಲಿಯವರೆಗೆ) ವೇತನ ನೀಡದೆ ಇರುವ ಕಾರಣ, ನನ್ನ ಕುಟುಂಬದ ಸದಸ್ಯರ ಮೂರು ಹೊತ್ತಿನ ಊಟ ಮತ್ತು ಬದುಕಲು ಅಗತ್ಯವಿರುವ ಕನಿಷ್ಠ ಸೌಲಭಅಯ ಹಾಗೂ ನನ್ನ ಗರ್ಭಿಣಿ ಪತ್ನಿ, ನನ್ನ ವಯಸ್ಸಾದ ತಂದೆ, ಅಜ್ಜಿಯರ ವೈದ್ಯಕೀಯ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಧಯಾಪರರಾದ ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೇ, ನನ್ನ ಗರ್ಭಿಣಿ ಪತ್ನಿಯ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆ ಹೊಂದಿರುವ ಪಾಲಕರನ್ನು ಉಳಿಸಿಕೊಳ್ಳಲು ಹಣ ಹೊಂದಾಣಿಸುವುದು ಅಗತ್ಯವಿದ್ದು, ಅದಕ್ಕಾಗಿ ರಾತ್ರಿ ಪಾಳೆಯ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಕಛೇರಿ ಅವಧಿಯ ನಂತ್ರ ನನ್ನ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಅಲ್ಪಾವಧಿ ಕೆಲಸವಾಗಿ ನಿರ್ವಹಿಸಲು ಸರ್ಕಾರವು ಸಂಬಳ ನೀಡುವವರೆಗೆ ಅನುಮತಿ ನೀಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ ಎಂಬುದಾಗಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.