ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಮಹೇಶ್ ಕುಮಟಳ್ಳಿಯವರನ್ನು ಹೊರತುಪಡಿಸಿ ಉಳಿದ 10 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಕುಮಟಳ್ಳಿ ಪಕ್ಷದ ನಿರ್ಧಾರದಿಂದ ಬೇಸರವವಾಗಿದೆ. ಆದರೆ, ಅವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ನನಗೆ ಮಂತ್ರಿಸ್ಥಾನ ತಪ್ಪಲು ಕಾರನ ಏನಿರಬಹುದು ಎಂಬಿತ್ಯಾದಿ ವಿವರವನ್ನು ಯಡಿಯೂರಪ್ಪನವರ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಕೈ ಬಿಟ್ಟಿದ್ದಾರೆ. ಮಂತ್ರಿ ಸ್ಥಾನ ನೀಡುವುದು ಕಷ್ಟ ಎಂಬುದನ್ನು ತಿಳಿಸಿದ್ದಾರೆ. ಅದಕ್ಕೆ ಕಾರಣ ಗೊತ್ತಿಲ್ಲ. ರಾಜಕೀಯ ಕಾರಣಗಳನ್ನು ತಿಳಿಸಲು ಅವರಿಗೂ ಕಷ್ಟವಾಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದರು.
ಸಚಿವ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಟೆನ್ಷನ್ ಇಲ್ಲ, ಸಚಿವನಾಗಿಲ್ಲ ಎಂದು ಸ್ವಲ್ಪ ನೋವಾಗುತ್ತಿದೆ ಅಷ್ಟೆ. ನಾನು ಹಲವಾರು ವರ್ಷಗಳಿಂದ ರಾಜಕೀಯದಲ್ಲೇ ಇದ್ದೇನೆ. ಗೌರವಯುತ ಸ್ಥಾನ ಸಿಕ್ಕಿತು ಎಂದರೆ ಸಂತೋಷವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಮುಜುಗರ ಆಗುವಂತೆ ಮಾತನಾಡಬಾರದು ಎಂದು ಸುಮ್ಮನಿದ್ದೇನೆ. ನೆಟ್ಟಗಿರುವ ಮರ ಬೇಗ ಮುರಿದು ಬೀಳುತ್ತದೆ. ಅಸಮಾಧಾನ ಇದೆಯೋ, ಇಲ್ಲವೋ ಎಂಬುದಕ್ಕಿಂತ ಪಕ್ಷದ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ ಎಂದು ತಿಳಿಸಿದ್ದಾರೆ.