ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.70 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ಪೈಕಿ ಈವರೆಗೆ 2.63 ಲಕ್ಷ (ಶೇ 97) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಲವೆಡೆ ಹದ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ರೈತರು ಈ ಬಾರಿ ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ.
ಈ ಬೆಳೆ ಬಿತ್ತನೆ ಗುರಿ 67 ಸಾವಿರ ಹೆಕ್ಟೇರ್ ಇದ್ದರೆ, 97 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ನವಲಗುಂದ ತಾಲ್ಲೂಕಿನಲ್ಲಿ ಅತೀ ಹೆಚ್ಚು 38 ಸಾವಿರ ಹೆಕ್ಟೇರ್, ಅಣ್ಣಿಗೇರಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ, ಸೋಯಾಬಿನ್, ಹತ್ತಿ ಹೆಚ್ಚು ಬಿತ್ತನೆ ಮಾಡಿದ್ದಾರೆ.
‘ಹೆಸರು ಕಡಿಮೆ ಅವಧಿ (70 ದಿನ) ಬೆಳೆ. ಈ ಬಾರಿ ಬೇಗ ಮಳೆಯಾಗಿದೆ. ಇದು ಸುಲಭದ ಬೆಳೆ. ಹಿಂಗಾರು ಹಂಗಾಮು ಬಿತ್ತನೆಗೆ ಅನುಕೂಲವಾಗುತ್ತದೆ ಎಂದು ಹಲವು ರೈತರು ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಈಗ ಹೆಸರಿಗೆ ಬೆಲೆ ಚೆನ್ನಾಗಿದೆ. ಕನಿಷ್ಠ ಬೆಂಬಲ ಬೆಲೆಯೂ ಚೆನ್ನಾಗಿದೆ. ಹೀಗಾಗಿ, ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ’ ಎಂದು ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಏಕದಳ ಧಾನ್ಯ (ಭತ್ತ, ಜೋಳ, ರಾಗಿ, ಮುಸುಕಿನ ಜೋಳ…) 59 ಸಾವಿರ ಹೆಕ್ಟೇರ್, ದ್ವಿದಳ ಧಾನ್ಯ (ಹೆಸರು, ಉದ್ದು, ತೊಗರಿ, ಹುರುಳಿ…) 1.09 ಲಕ್ಷ ಹೆಕ್ಟೇರ್, ಎಣ್ಣೆಕಾಳು (ಶೇಂಗಾ, ಸೋಯಾಬೀನ್, ಎಳ್ಳು..) 54 ಸಾವಿರ ಹೆಕ್ಟೇರ್, ವಾಣಿಜ್ಯ ಬೆಳೆ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಮುಂಗಾರು ಪೂರ್ವದಲ್ಲಿ ಸ್ವಲ್ಪ ಮಳೆಯಾಗಿತ್ತು. ಜೂನ್ನಲ್ಲಿ ಹುಬ್ಬಳ್ಳಿ ನಗರ ಮತ್ತು ಅಳ್ನಾವರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಿದೆ. ಬಾಕಿ 6 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕೊಂಚ ಜಾಸ್ತಿ ಸುರಿದಿದೆ.