ಬೆಂಗಳೂರು ಏ.2- ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ತಪ್ಪು ನೀತಿಗಳಿಂದ ರಾಜ್ಯದ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ ವಿಧಾನ ಪರಿಷತ್ ನ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ. ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಇದರ ಪರಿಣಾಮವಾಗಿ ರಾಜ್ಯದ ಮುಂದಿನ ಶೈಕ್ಷಣಿಕ ವರ್ಷ ಹಳಿತಪ್ಪಲಿದೆ.
ಕರೊನಾ ಹೆಮ್ಮಾರಿ ನಮ್ಮ ಎಲ್ಲಾ ವ್ಯವಸ್ಥೆಯನ್ನು ದಾರಿ ತಪ್ಪಿಸಿದೆ. ಅದಕ್ಕೆ ಶಿಕ್ಷಣ ಇಲಾಖೆ ಹೊರತಾಗಿಲ್ಲ. ಹಾಗೆಂದು ನಾವು ಕೈ ಚೆಲ್ಲುವ ಅವಶ್ಯಕತೆಯೂ ಇಲ್ಲ. ಇಲಾಖೆ ಮತ್ತು ಸಚಿವರ ಸಮಯೋಚಿತ ನಿಲುವು, ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯ, ಬದುಕು ಕಟ್ಟಿಕೊಡಲು ಸಾಧ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪಿ ಯು ಪರೀಕ್ಷೆ ಬರೆದಿದ್ದು, ಕೇವಲ ಇಂಗ್ಲೀಷ್ ಪತ್ರಿಕೆ ಮುಂದೂಡಲಾಗಿದೆ. ಇಲಾಖೆ ಈ ಪರೀಕ್ಷೆ ಬಾಕಿ ಇಟ್ಟು ಮೌಲ್ಯ ಮಾಪನ ಪ್ರಾರಂಭಿಸಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳ ಸಹಮತ ಪಡೆದು ಇತರೆ ವಿಷಯಗಳ ಸರಾಸರಿ ಅಂಕಗಳಿಗೆ ಅನುಗುಣವಾಗಿ ಇಂಗ್ಲೀಷ್ ಪತ್ರಿಕೆಗೆ ಅಂಕ ನೀಡಿ ಫಲಿತಾಂಶ ನೀಡಬೇಕು.
ಇಲ್ಲದೇ ಹೋದರೆ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ರಾಜ್ಯದಲ್ಲಿ ಕೆ2 ಸಮಸ್ಯೆ ಬಗೆಹರಿದಿಲ್ಲ. ಕೆಲವು ಕಡೆ ಅನುದಾನಿತ ಶಾಲಾ ನೌಕರರ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಸರಿಪಡಿಸಬೇಕು.
ರಾಜ್ಯದಲ್ಲಿ ಲಾಕ್ ಡೌನ್ ಇದ್ದು ಕೊರೊನಾ ವೈರಸ್ ವಿರುದ್ಧ ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಖಾಸಗಿ ಶಾಲೆಗಳು ಕೈ ಜೋಡಿಸಿವೆ. ಸಚಿವರು ಬೆಂಗಳೂರು ನಗರದ ಕೆಲವು ಶಾಲೆಗಳಲ್ಲಿ ನಡೆಯುವ ತಪ್ಪುಗಳನ್ನು ಎಲ್ಲಾ ಶಾಲೆಗಳಿಗೆ ಅನ್ವಯಿಸುವುದು ಬೇಡಿ.
ಕೊರೊನಾ ವಿರುದ್ಧದ ಹೋರಾಟ ದಲ್ಲಿ ಖಾಸಗಿ ಶಾಲೆ, ಶಿಕ್ಷಕರು, ಹಾಗೂ ಶಾಲಾ ಸಿಬ್ಬಂದಿ ವರ್ಗವನ್ನು ಒಟ್ಟಾಗಿ ಕರೆದೊಯ್ಯಲಿ. ಬಲವಂತ ಶುಲ್ಕ ವಸೂಲಿ ಮೇಲೆ ನಿರ್ದಿಷ್ಟ ಶಾಲೆಯ ಮೇಲೆ ನಿರ್ದಿಷ್ಟ ದೂರು ಬಂದರೆ ಸಚಿವರು ಕ್ರಮ ಕೈಗೊಳ್ಳಲಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇದ್ದರೆ ಕೊಡಲೇ ಕ್ರಮ ಕೈಗೊಳ್ಳಬೇಕು. ನಿರ್ದಿಷ್ಟ ದೂರುಗಳು ಕೆಲವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಬಂದರೂ ಇಲ್ಲಿಯವರೆಗೆ ಕ್ರಮ ತೆಗೆದುಕೊಡಿಲ್ಲ.
ಏಪ್ರಿಲ್14 ರ ನಂತರವೂ ಲಾಕ್ ಡೌನ್ ಮುಂದುವರೆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಿಂದಿನ ಶಿಕ್ಷಣ ಸಚಿವರು, ಇಲಾಖೆ ಅಧಿಕಾರಿಗಳು,ಶಿಕ್ಷಣ ತಜ್ಞರು, ಮಕ್ಕಳ- ಪೋಷಕರ ಪ್ರತಿನಿಧಿಗಳ ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ಪಡೆದು ಒಮ್ಮತದ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದಿದ್ದಾರೆ.