ಬೆಳಗಾವಿ : ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಹೊರ ವಲಯದಲ್ಲಿ ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಡಿಸಿಐಬಿ ಪೊಲೀರು, ಕಲಬೆರೆಕೆ ಹಾಲು ತಯಾರಿಕೆಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಲಾಗಿದೆ.
ಡಿಸಿಐಬಿ ಘಟಕದ ನಿರೀಕ್ಷಕ ನಿಂಗನಗೌಡಾ ಪಾಟೀಲ ನೇತೃತ್ವದ ತಂಡ, ಎಸ್ಪಿ ಅವರ ಮಾರ್ಗದರ್ಶನದಂತೆ ದಾಳಿ ನಡೆಸಿದೆ. ಕಲಬೆರೆಕೆ ಹಾಲು ತಯಾರಿಕೆಯಲ್ಲಿ ತೊಡಗಿದ್ದ ಉಮರಲಿ ಅನಸಾರಿ(೨೩) ಎಂಬುವನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ ಸುಮಾರು ೬೬೫ ಲೀಟರ್ ಕಲಬೆರೆಕೆ ಹಾಲನ್ನು, ಅದಕ್ಕೆ ಉಪಯೋಗಿಸುತ್ತಿದ್ದ ಪೌಡರ್, ೧೫೦ ಲೀಟರ್ ಬಿಳಿ ಬಣ್ಣ ದ್ರಾವಣ, ೯೦ ಪ್ಯಾಕೇಟು ಫಮೋಲಿನ್ ಎಣ್ಣೆ, ಕಲಬೆರಕೆಗೆ ಉಪಯೋಗಿಸುತ್ತಿದ್ದ ಯಂತ್ರ, ಹೀಗೆ ಒಟ್ಟು ೪೯, ೨೭೦ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ದಾಳಿಯಲ್ಲಿ ಸಿಬ್ಬಂದಿಗಳಾದ ಡಿ.ಕೆ.ಪಾಟೀಲ, ವಿ.ವಿ.ಗಾಯಕವಾಡ, ಟಿ.ಕೆ.ಕೊಳಚಿ, ಎಸ್.ಎಮ್. ಮಂಗಣ್ಣವರ, ಅರ್ಜುನ ಮಸರಗುಪ್ಪಿ ಪಾಲ್ಗೊಂಡಿದ್ದರು. ಈ ಹಿಂದೆ ಹಲವು ಬಾರಿ ಅಥಣಿ ತಾಲ್ಲೂಕಿನ ವಿವಿಧೆಡೆ ಕಲಬೆರಕೆ ಹಾಲು ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ.