ಬೆಂಗಳೂರು: ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ರಾಜಕೀಯ ಪ್ರವೇಶಿಸಲು ತೀರ್ಮಾನಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರಿಂದ ಕಾಲ್ ಮೇಲೆ ಕಾಲ್ ಬರುತ್ತಿದೆಯಂತೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಂದಲೂ ಭಾಸ್ಕರ್ ರಾವ್ ಅವರಿಗೆ ಆಫರ್ ಇದೆಯಂತೆ. ಕಳೆದು 15 ದಿನಗಳಿಂದ ರಾಷ್ಟ್ರೀಯ ನಾಯಕರು ಕಾಲ್ ಮಾಡಿ ಏನು ತೀರ್ಮಾನ ತೆಗೆದುಕೊಂಡಿರಿ ಎಂದು ವಿಚಾರಿಸಿದ್ದಾರಂತೆ. ಹೀಗೊಂದು ಸುದ್ದಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೀಗಾಗಿ ಭಾಸ್ಕರ್ ರಾವ್ ಅವರು ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಭಾಸ್ಕರ್ ರಾವ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮುನಿಸಿಕೊಂಡಿದ್ದಾರೆ. ಇವರು ಸಮಾಧಾನ ಮಾಡಲು ಬಲಿಷ್ಠರು ಅದರಲ್ಲೂ ಅಲ್ಲೇ ಕೆಲಸ ಮಾಡಿದ ಬ್ರಾಹ್ಮಣ ಸಮುದಾಯದ ನಾಯಕರನ್ನು ಕಣಕ್ಕಿಳಿಸುವ ಯೋಚನೆ ಬಿಜೆಪಿಯದ್ದು. ಹೀಗಾಗಿ ಬಿಜೆಪಿಗೆ ಬಂದಲ್ಲಿ ಭಾಸ್ಕರ್ ರಾವ್ ಅವರು ಉತ್ತರ ಪ್ರದೇಶದಿಂದಲೇ ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ.
ಇನ್ನು, ಕಾಂಗ್ರೆಸ್ ಪಕ್ಷದಿಂದಲೂ ಭಾಸ್ಕರ್ ರಾವ್ ಅವರಿಗೆ ಆಫರ್ ನೀಡಲಾಗಿದೆ. ಬಸವನಗುಡಿ, ಮಲ್ಲೇಶ್ವರಂ, ಜಯನಗರ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಯಬಹುದು. ಈ ರೀತಿಯ ಸ್ವಾತಂತ್ರ್ಯವನ್ನ ಕಾಂಗ್ರಸ್ ಪಕ್ಷ ನೀಡಿದೆ ಎನ್ನುವ ಮಾತು ಕೇಳಿ ಬಂದಿದೆ. ಹೀಗಿದ್ದರೂ ಎರಡೂ ಪಕ್ಷಗಳಿಗೆ ಯಾವುದೇ ಉತ್ತರ ಭಾಸ್ಕರ್ ರಾವ್ ಅವರು ನೀಡಿಲ್ಲ.
ಈ ಹಿಂದೆಯೇ ರಾಜಕೀಯಕ್ಕೆ ಬರುವುದಾಗಿ ಭಾಸ್ಕರ್ ರಾವ್ ಅವರು ಹೇಳಿಕೆ ನೀಡಿದ್ದರು. ಇನ್ನು ಎಲ್ಲಾ ಪಕ್ಷವರಿಗೂ ಭಾಸ್ಕರ್ ರಾವ್ ಅವರು ಉತ್ತಮ ಸ್ನೇಹಿತರು. ಅದರಲ್ಲಂತೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹೆಚ್ಚು ಆಪ್ತರು. ಹೀಗಾಗಿ ಕೇಂದ್ರದಿಂದಲೇ ಭಾಸ್ಕರ್ ರಾವ್ ಅವರು ತಮ್ಮ ರಾಜಕೀಯ ಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ.