ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪಿರುವುದು ಗೊತ್ತಿದ್ದರೂ ಕೂಡ ಚುನಾವಣೆ ನೆಪದಲ್ಲಿ ಇಷ್ಟು ದಿನ ನಾನಾ ನೆಪ ಹೇಳ್ತಾ, ನಾಮ್ ಕಾ ವಾಸ್ತೆಗೆ ಎಂಬಂತೆ ಕೆಲವೊಂದಿಷ್ಟು ನಿಯಮಗಳನ್ನು ಪ್ರಕಟಿಸಿದ್ದ ಸರ್ಕಾರ ಈಗ ಇದಕ್ಕೆ ತಕ್ಕ ಬೆಲೆ ತೆರುತ್ತಿರುವಂತಿದೆ.
ದಿನೇ ದಿನೇ ಕೊರೊನಾ ಸಾವು ನೋವುಗಳು ಹೆಚ್ಚುತ್ತಿವೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ಘನಘೋರವಾಗಿದೆ. ಹೀಗಾಗಿ ರಾಜ್ಯಸರ್ಕಾರ ನಿದ್ದೆಯಿಂದ ಎಚ್ಚೆತ್ತಂತೆ ತರಾತುರಿಯಲ್ಲಿ ಸಭೆ ಮೇಲೆ ಸಭೆ ಮಾಡುತ್ತಿದೆ. ಬೆಂಗಳೂರಿಗೆ ಅನ್ವಯ ಆಗುವಂತೆ ಹೆಚ್ಚುವರಿ ಪ್ರತ್ಯೇಕ ಟಫ್ ರೂಲ್ಸ್ ಜಾರಿಗೆ ಚಿಂತನೆ ನಡೆಸಿದೆ.
ನಾಳೆ ಬೆಂಗಳೂರಿನ ಶಾಸಕರು, ಸಂಸದರ ಜೊತೆ ಸರ್ಕಾರ ಮಹತ್ವದ ಸಭೆ ನಡೆಸಲಿದ್ದಾರೆ. ನಂತರ ಸಿಎಂ ಜೊತೆ ಒಮ್ಮೆ ಸಮಾಲೋಚಿಸಿ ನಾಳೆ ಸಂಜೆ ವೇಳೆ ಬೆಂಗಳೂರು ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಮಂಗಳವಾರದಿಂದ ಬೆಂಗಳೂರು ನಗರ ಲಾಕ್ ಆಗೋದು ಬಹುತೇಕ ನಿಶ್ಚಯವಾಗಿದೆ. ಆದರೆ ಅದು ಯಾವ ಸ್ವರೂಪದ್ದು ಎನ್ನುವುದು ಮಾತ್ರ ಫೈನಲ್ ಆಗಬೇಕಿದೆ.
ಇಂದು ಸಿಎಂ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್ ಮತ್ತು ಸುಧಾಕರ್ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ರು. ಇದಕ್ಕೂ ಮುನ್ನ, ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಬೆಂಗಳೂರು ಲಾಕ್ ಸಂಬಂಧ ಚರ್ಚೆ ನಡೆಸಿದ್ರು. ನಂತರ ಮಾತನಾಡಿದ ಆರ್ ಅಶೋಕ್, ಲಾಕ್ಡೌನ್ ಮಾಡೋ ಪ್ರಶ್ನೆಯೇ ಇಲ್ಲ. ಕಳೆದ ಬಾರಿ ಲಾಕ್ಡೌನ್ನಿಂದಲೇ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಆದ್ರೆ ಬೆಂಗಳೂರಿಗೆ ಪ್ರತ್ಯೇಕ ಟಫ್ ರೂಲ್ಸ್ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ರು.
ಸಚಿವ ಸುಧಾಕರ್ ಮಾತನಾಡಿ, ಈಗಾಗಲೇ ಕೊರೋನಾ ಸಮುದಾಯದ ಮಟ್ಟಕ್ಕೆ ಹಬ್ಬಿದೆ. ಬೆಂಗಳೂರಿಗೆ ಶೇಷ ಕ್ರಮದ ಅವಶ್ಯಕತೆ ಇದೆ. ಇಲ್ಲದೇ ಹೋದ್ರೆ ಮತ್ತಷ್ಟು ಸಮಸ್ಯೆ ಆಗುತ್ತೆ. ನಾಳಿನ ಸಭೆಯಲ್ಲಿ ಕಠಿಣ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದರು. ನಿನ್ನೆ ರಾಜ್ಯಪಾಲರನ್ನು ಸಚಿವ ಸುಧಾಕರ್ ಭೇಟಿ ಮಾಡಿ, ಕೊರೊನಾ ಸ್ಥಿತಿಗತಿಯ ಬಗ್ಗೆ ವರದಿ ನೀಡಿದರು. ಇಂದು ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ವಾಲಾ ಕೋವಿಡ್ ಮಾಹಿತಿ ಪಡೆದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಇನ್ನಷ್ಟು ಬಿಗಿಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದರು.