ನವದೆಹಲಿ: ದಿನೇ ದಿನೇ ಹೆಚ್ಚುತ್ತಲೇ ಇರುವ ತೈಲಗಳ ಬೆಲೆ ಕುರಿತು ದೇಶಾದ್ಯಂತ ಹಲವಾರು ಚರ್ಚೆಗಳು ಹಾಗೂ ವಿರೋಧಗಳು ವ್ಯಕ್ತವಾಗಿದ್ದು, ಇದೀಗ ಈ ಬಗ್ಗೆ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಈ ವಿಷಯದಲ್ಲಿ ನಾವು ಧರ್ಮ ಸಂಕಟಕ್ಕೆ ಸಿಲುಕಿದ್ದೇವೆ’ ಎಂದು ಹೇಳಿದ್ದರು.
ತೈಲ ಬೆಲೆ ಇಳಿಕೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಮಾತನಾಡಿರುವ ಸೀತಾರಾಮನ್ ಅವರು, ‘ಬೆಲೆ ಇಳಿಕೆ ವಿಚಾರದಲ್ಲಿ ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮುಕ್ತ ಚರ್ಚೆ ನಡೆಸಬೇಕು’ ಎಂದು ಸಲಹೆ ನೀಡಿದ್ದಾರೆ. ‘ಪೆಟ್ರೋಲ್, ಡಿಸೇಲ್ ಮೇಲೆ ಕೇವಲ ಕೇಂದ್ರ ಸರ್ಕಾರ ಮಾತ್ರ ತೆರಿಗೆ ವಿಧಿಸುವುದಿಲ್ಲ. ರಾಜ್ಯ ಸರ್ಕಾರಗಳೂ ವಿಧಿಸುತ್ತವೆ. ಶೇ 41 ರಷ್ಟು ಪಾಲು ತೆರಿಗೆ ಸಂಗ್ರಹ ರಾಜ್ಯಗಳಿಗೆ ಹೋಗುತ್ತದೆ’ ಎಂದು ಹೇಳಿದರು.
ಇಂಧನ ದರ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಬೇಸರದ ಸಂಗತಿಯಾಗಿದೆ. ಪ್ರಸ್ತುತ ಪೆಟ್ರೋಲ್, ಡಿಸೇಲ್ ದರ ಏರಿಕೆ ಬಗ್ಗೆ ಜನರಿಗೆ ಎಷ್ಟೇ ಸತ್ಯಾಂಶಗಳನ್ನು ಹೇಳಿದರೂ ಸದ್ಯ ಅದು ಯಾರಿಗೂ ಮನವರಿಕೆಯಾಗುವುದಿಲ್ಲ. ಇದಕ್ಕೆಲ್ಲ ಇರುವುದು ಒಂದೇ ಪರಿಹಾರ. ಅದು ಮುಂದಿನದ ದಿನಗಳಲ್ಲಿ ಬೆಲೆ ಕುಸಿತ. ಸದ್ಯ ನಾವು ಧರ್ಮಸಂಕಟದಲ್ಲಿ ಸಿಲುಕಿದ್ದೇವೆ’ ಎಂದು ಸಚಿವೆ ಹೇಳಿದ್ದರು.