ಬಾಗಲಕೋಟೆ (ಜ.23): ಸದ್ಯಕ್ಕೆ 8, 9 ತರಗತಿ ಆರಂಭಿಸಬೇಕೆಂದು ಬೇಡಿಕೆ ಬಂದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬೇಡಿಕೆ ಬಂದಿದ್ದು, 8,9 ಹಾಗೂ ಪ್ರಥಮ ಪಿಯುಸಿ ತರಗತಿ ಆರಂಭಿಸಲು ಬೇಡಿಕೆ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ, ಆರಂಭಿಸಿದ ಬಳಿಕ 1ರಿಂದ 5ನೇ ತರಗತಿ ಆರಂಭಿಸುವ ಯೋಚಿಸಲಾಗುವುದು. ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ಮಾಡಿ, ಅದರೊಂದಿಗೆ ರೆಗ್ಯುಲರ್ ಕ್ಲಾಸ್ ಆರಂಭಿಸುವುದಕ್ಕೆ ನಿರ್ಧಾರ ಮಾಡಲಾಗುವುದು ಎಂದು ಜಮಖಂಡಿಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುಲ್ಯಾಳ್ ಕ್ರಾಸ್ ಬಳಿಯ ವಿದ್ಯಾಭವನ ಶಾಲೆಯಲ್ಲಿ ಕಂಪ್ಯೂಟರ್ ವಿತರಿಸಲು ಆಗಮಿಸಿದ ವೇಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಆರಂಭಿಸಲು ಆಗಲಿಲ್ಲ. ನವೆಂಬರ್ ನಲ್ಲಿ ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಡಿಸೆಂಬರ್ನಲ್ಲಿ ಚರ್ಚಿಸಿ ನಿರ್ಧರಿಸೋಣ ಎಂದಿತು. ಜನವರಿ 1 ರಿಂದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಯಿತು. 6ರಿಂದ 9 ವರೆಗೆ ವಿದ್ಯಾಗಮ ಯೋಜನೆಯಡಿ ಶಿಕ್ಷಣ ನೀಡಲಾಗುತ್ತಿದೆ ಎಂದರು.ಖಾಸಗಿ ಶಾಲೆಯ ಶುಲ್ಕ ನಿಗದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದ ಪೋಷಕರು ಶುಲ್ಕ ಕಟ್ಟೋಕೆ ಆಗ್ತಿಲ್ಲ ಎಂದು ಗಮನಕ್ಕೆ ತಂದಿದ್ದಾರೆ. ಈ ಕೋವಿಡ್ ಎಲ್ಲರ ಆರ್ಥಿಕ ಪರಿಸ್ಥಿತಿ ಜರ್ಜರಿತರನ್ನಾಗಿಸಿದೆ. ಪರಿಸ್ಥಿತಿ ಚೆನ್ನಾಗಿದ್ದಾಗ ಒಳ್ಳೆ ಶಾಲೆಗೆ ದಾಖಲಿಸಿದ್ದರು. ಈಗ ಪರಿಸ್ಥಿತಿ ಸರಿಯಿಲ್ಲ ಎಂದು ಶುಲ್ಕ ಕಡಿಮೆ ಮಾಡಲು ಮನವಿ ಮಾಡ್ತಿದ್ದಾರೆ. ಖಾಸಗಿ ಶಾಲೆಯವರು ಪೋಷಕರು ಶುಲ್ಕ ಕಟ್ಟದಿದ್ದರೆ ಶಿಕ್ಷಕರಿಗೆ ವೇತನ ಕೊಡೋಕೆ ಆಗುತ್ತಿಲ್ಲ ಅಂತಿದ್ದಾರೆ. ಕೆಲ ಶಿಕ್ಷಕರಿಗೆ ಸರಿಯಾಗಿ ವೇತನ ಸಿಗದೇ ತರಕಾರಿ ಮಾರೋದನ್ನ ನೋಡಿದ್ದೀವಿ. ಈಗ ನಮ್ಮೆಲ್ಲರ ಮುಂದಿರೋದು ಫೀಸ್ ಸ್ಟ್ರಕ್ಚರ್. ನಮ್ಮ ಆಯುಕ್ತರು ಪೋಷಕರು, ಖಾಸಗಿ ಶಾಲೆ ಶಿಕ್ಷಕರ ಪ್ರತಿನಿಧಿ ಕರೆದು ವಿಸ್ತೃತ ಚರ್ಚೆ ಮಾಡಿದ್ದಾರೆ. ಸರ್ಕಾರದ ಮುಂದೆ ಮೂರು ವಿಧದ ಸೂತ್ರ ಇಟ್ಟಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಿಕ್ಷಕ ಕ್ಷೇತ್ರ, ಪದವೀಧರ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿದ್ದೀನಿ. ಅತೀ ಶೀಘ್ರದಲ್ಲೇ ಪೋಷಕರು ಭಾರ ಆಗದೇ ರೀತಿ, ಖಾಸಗಿ ಶಾಲೆ ಶಿಕ್ಷಕರಿಗೆ ವೇತನ ಸಿಗುವ ಹಾಗೆ ಒಂದು ಸೂತ್ರ ಪ್ರಕಟಿಸ್ತಿವಿ. ಶುಲ್ಕ ಕಟ್ಟದೇ ಇರುವ ವಿದ್ಯಾರ್ಥಿಗೆ ಆನ್ಲೈನ್ ಪಾಸ್ ವರ್ಡ್ ನೀಡದ ವಿಚಾರವಾಗಿ, ಪೋಷಕರ ಹಾಗೂ ಖಾಸಗಿ ಶಾಲೆಯವರ ಮಧ್ಯೆ ವ್ಯತ್ಯಾಸದಿಂದ ವಿದ್ಯಾರ್ಥಿಗಳ ಮೇಲೆ ಕಷ್ಟ ಆಗಬಾರದು. ನಮ್ಮಲ್ಲಿ ಒಂದು ಗಾದೆಯಿದೆ. ಗಂಡ ಹೆಂಡತಿ ಮಧ್ಯೆ ಕೂಸು ಬಡವಾಯ್ತು ಅನ್ನೋ ಹಾಗೆ ಆಗಬಾರದೆಂದು ಕ್ರಮ. ಈ ಬಗ್ಗೆ ನಮ್ಮ ಆಯುಕ್ತರು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಯಾವುದಾದರೂ ಈ ಬಗ್ಗೆ ದೂರು ಬಂದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.