ಬಾಗಲಕೋಟೆ : ಪಂಚಮಸಾಲಿ ಲಿಂಗಾಯತ ಸಮಾಜ 2ಎ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 23 ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹುಟ್ಟು ಹಬ್ಬದ ದಿನ ಹಾಗೂ ರೈತ ದಿನಾಚರಣೆ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯ ಹೋರಾಟಕ್ಕೆ ಅಣಿಯಾಗಿದ್ದಾರೆ. ಸ್ವತಃ ಸ್ವಾಮೀಜಿ ರಕ್ತ ದಾನ ಮಾಡುವ ಮೂಲಕ ರಕ್ತದಾಸೋಹಕ್ಕೆ ಚಾಲನೆ ನೀಡಿದರು. ರಕ್ತ ಕೊಡುವೇವು, ಮೀಸಲಾತಿ ಪಡೆವೇವು ಎನ್ನುವ ರಕ್ತದಾಸೋಹ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲು ಸ್ವಾಮೀಜಿ ಮುಂದಾಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ರಕ್ತದಾನ ಮಾಡಿದ ಬಳಿಕ ಸಮಾಜದ ಮುಖಂಡರು, ಭಕ್ತರು ರಕ್ತದಾನ ಮಾಡಿ, ಸ್ವಾಮೀಜಿಗಳಿಗೆ ಜೊತೆಯಾದರು.
ಜಿಲ್ಲೆ ಸೇರಿದಂತೆ ರಾಜ್ಯದ 22ಜಿಲ್ಲೆಗಳಲ್ಲೂ 5ಸಾವಿರಕ್ಕೂ ಹೆಚ್ಚು ಭಕ್ತರು ರಕ್ತದಾನ ಮಾಡುವ ಮೂಲಕ ರಕ್ತ ದಾಸೋಹದ ಮೀಸಲಾತಿ ಹಕ್ಕೊತ್ತಾಯ ಮಾಡಿದರು. ಜೊತೆಗೆ ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಮಠದಾವರಣದಲ್ಲೂ ಭಕ್ತರು ರಕ್ತದಾನ ಮಾಡಿದರು. ಜನವರಿ 14ರಂದು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೆ ತೀರ್ಮಾನಿಸಲಾಗಿದ್ದು, ಮೀಸಲಾತಿ ಕುರಿತು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಸರ್ಕಾರ ಈ ಕುರಿತು ಸ್ಪಂದಿಸಬೇಕು. ಇಲ್ಲವಾದರೆ ನಮ್ಮ ಯುವಕರು ಉಗ್ರ ಹೋರಾಟ ಮಾಡಲು ಸಿದ್ದರಾಗುತ್ತಾರೆ. ಮುಂದಾಗುವ ಅನಾಹುತಕ್ಕೆ ಸರ್ಕಾರ ಕಾರಣವೆಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಈ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ವಾಮೀಜಿಗಳಿಗೆ ಭರವಸೆ ನೀಡಿದ್ದರು. ಆಗ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು. ಕಳೆದ ತಿಂಗಳು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರು. ಆದರೆ, ಪಂಚಮಸಾಲಿ ಲಿಂಗಾಯತ ಸಮಾಜ 2ಎಗೆ ಸೇರ್ಪಡೆ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ವಿವಿಧ ರೀತಿಯಲ್ಲಿ ಹೋರಾಟಕ್ಕೆ ಸ್ವಾಮೀಜಿಗಳು ಅಣಿಯಾಗಿದ್ದಾರೆ. ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2 ಎ ಮೀಸಲಾತಿ ಕೊಡದಿದ್ದರೆ. ಜನವರಿ 14ರಂದು ಕೂಡಲಸಂಗಮದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿಕೊಂಡು, ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುತ್ತೇವೆ. ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಈಗ ರಕ್ತ ಕೊಡುತ್ತಿದ್ದೇವೆ.ಮುಂದೇನಾಗುತ್ತೆ ಗೊತ್ತಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷ ,ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.