ಬೆಂಗಳೂರು, ಡಿ.15- ಗೋ ಹತ್ಯೆ ನಿಷೇಧ ವಿಧೇಯಕ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಯ ಉದ್ದೇಶದಿಂದ ನಾಳೆ ಕರೆಯಲಾಗಿರುವ ಒಂದು ದಿನದ ವಿಧಾನಪರಿಷತ್ನ ಅಧಿವೇಶನ ರಣಾಂಗಣವಾಗುವ ಪರಿಸ್ಥಿತಿ ಎದುರಾಗಿದೆ. ಸಭಾಪತಿ ಚುನಾವಣೆ ವಿಷಯದಲ್ಲಿ ಬಿಜೆಪಿ, ಜೆಡಿಎಸ್ನದು ಒಂದು ನಿಲುವಾದರೆ, ಕಾಂಗ್ರೆಸ್ ಪಕ್ಷದ್ದು ಪ್ರತ್ಯೇಕ ನಿಲುವಾಗಿದೆ.
ಬಿಜೆಪಿ ರಾಜ್ಯಪಾಲರ ಮೊರೆ ಹೋಗಿ ಅಧಿವೇಶನಕ್ಕೆ ಸಮಯ ನಿಗದಿ ಮಾಡಿರುವುದು ಪ್ರಮುಖವಾಗಿ ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕಾರ ಮಾಡಲಿಕ್ಕಾಗಿ. ಆದರೆ, ಬಿಜೆಪಿಯ 11 ಮಂದಿ ಸದಸ್ಯರು ನ.25ರಂದು ನೀಡಿದ್ದ ಅವಿಶ್ವಾಸ ನಿಲುವಳಿ ಸೂಚನೆಯನ್ನು ಪ್ರತಾಪ್ಚಂದ್ರಶೆಟ್ಟಿ ಈಗಾಗಲೇ ತಿರಸ್ಕರಿಸಿ ಸದಸ್ಯರಿಗೆ ಕಾರ್ಯದರ್ಶಿ ಮೂಲಕ ಹಿಂಬರಹವನ್ನು ಕೊಡಿಸಿದ್ದಾರೆ.
ದರೆ, ಬಿಜೆಪಿ ಇದನ್ನು ಒಪ್ಪಲು ತಯಾರಿಲ್ಲ. ಸಭಾಪತಿಯವರ ವಿರುದ್ಧ ನಮ್ಮ ಅವಿಶ್ವಾಸ ನಿರ್ಣಯವಿದೆ. ಅದನ್ನು ಚರ್ಚಿಸಲು ಅವಕಾಶ ನೀಡಲೇಬೇಕು. ಸದನದ ಹೊರಗೆ ತಿರಸ್ಕರಿಸಿದ್ದೇನೆ ಎಂದು ಪ್ರಕಟಿಸುವುದು ಯೋಚಿತ ಅಲ್ಲ. ಕಲಾಪದಲ್ಲಿಯೇ ತಿರಸ್ಕಾರಕ್ಕೆ ಸಕಾರಣ ಕೊಟ್ಟು ರೂಲಿಂಗ್ಅನ್ನು ಹೇಳಬೇಕು. ಆ ವರೆಗೂ ನಾವು ನಮ್ಮ ಪಟ್ಟನ್ನು ಸಡಿಲಿಸುವುದಿಲ್ಲ. ನಾವು ನೀಡಿರುವ ಅವಿಶ್ವಾಸ ಗೊತ್ತುವಳಿ ಸೂಚನೆ ಊರ್ಜಿತವಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ.
ಬಿಜೆಪಿ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ. ಸಂಖ್ಯಾಬಲದ ಪ್ರಕಾರ ಜೆಡಿಎಸ್ ಬೆಂಬಲ ಸಿಕ್ಕಿದ್ದೇ ಆದರೆ ಕಾಂಗ್ರೆಸ್ ಪಕ್ಷದಿಂದ ಸಭಾಪತಿಯಾಗಿರುವ ಪ್ರತಾಪ್ಚಂದ್ರಶೆಟ್ಟಿ ಅವರು ಪದಚ್ಯುತಗೊಳ್ಳುವ ಸಾಧ್ಯತೆ ದಟ್ಟವಾಗಿವೆ. ವಿಧಾನಪರಿಷತ್ನಲ್ಲಿ ಬಿಜೆಪಿ 31 ಮಂದಿ ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 14 ಮಂದಿ ಸದಸ್ಯರನ್ನು ಹೊಂದಿದೆ. ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ಪಕ್ಷೇತರ, ಜೆಡಿಎಸ್ ಹಾಗೂ ಬಿಜೆಪಿ ಸೇರ್ಪಡೆಯಾದರೆ ಒಟ್ಟು 46 ಸದಸ್ಯರ ಸಂಖ್ಯಾ ಬಲವಾಗಲಿದೆ. ಕಾಂಗ್ರೆಸ್ ಸಭಾಪತಿ ಸೇರಿದಂತೆ ಒಟ್ಟು 29 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿದೆ.