ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಿತ್ತು. ಆದರೆ ಈಗ ಮತ್ತೊಂದು ಬಣ ಸೇರಿ ಗುಂಪು ರಾಜಕೀಯ ಜೋರಾಗಿದೆ.
ಯಡಿಯೂರಪ್ಪನವರ ಪರ ಒಂದು ಗುಂಪು, ಯಡಿಯೂರಪ್ಪನವರ ವಿರೋಧಿಗಳ ಗುಂಪು ರಾಜ್ಯ ಬಿಜೆಪಿಯಲ್ಲಿದ್ದು ಅವರ ಮಧ್ಯೆ ಕಚ್ಚಾಟ ನಡೆಯುತ್ತದೆ ಎಂದು ಆಗಾಗ ವಿರೋಧ ಪಕ್ಷಗಳು ನಾಯಕರು ಕಿಚಾಯಿಸುತ್ತಿರುತ್ತಾರೆ. ಈ ನಡುವೆ ದೋಸ್ತಿ ಸರ್ಕಾರದ ವಿರುದ್ಧ ಸಿಡಿದು ಕಾಂಗ್ರೆಸ್, ಜೆಡಿಎಸ್ನಿಂದ ವಲಸೆ ಬಂದ ಮಿತ್ರ ಮಂಡಳಿಯ ಶಾಸಕರ ಗುಂಪು ನಿರ್ಮಾಣವಾಗಿದೆ. ಈಗಾಗಲೇ ಇರುವ ಎರಡು ಬಣಗಳಿಂದಾಗಿ ಈಗ ಮಿತ್ರ ಮಂಡಳಿಯ ಸದಸ್ಯರ ಸದ್ಯದ ಸ್ಥಿತಿ ಡೋಲಾಯಮಾನವಾಗಿದೆ.
ಬಿಜೆಪಿ ಬಣಗಳ ಪೈಕಿ ಯಾರ ಜತೆ ಹೋಗಬೇಕು? ಯಾರ ಜತೆ ಹೋಗಬಾರದು? ತಮ್ಮ ಪರ ಯಾರು ಇದ್ದಾರೆ? ಯಾರು ಇಲ್ಲ? ಎಂಬ ಸ್ಪಷ್ಟತೆ ವಲಸಿಗರಿಗೆ ಸಿಗುತ್ತಿಲ್ಲ. ಬಿಜೆಪಿ ಬಣಗಳ ಪೈಕಿ ಗುರುತಿಸಿಕೊಳ್ಳದೇ ಇತ್ತ ಸುಮ್ಮನೆ ಇರಲೂ ಆಗದೇ ತೊಳಲಾಟ ಅನುಭವಿಸುತ್ತಿದ್ದಾರೆ. ವಲಸೆ ಬಂದ ನಾಯಕರು ಯಾವುದೇ ಸ್ಪಷ್ಟತೆ ಸಿಗದೇ ಕಕ್ಕಾಬಿಕ್ಕಿಯಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ವಲಸೆ ಬಂದ ನಾಯಕರು ಮೊನ್ನೆ ರಾತ್ರಿ ಸಭೆ ನಡೆಸಿದ್ದರು. ಸಭೆಯ ಬಳಿಕ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಮಾಡಿದ ಬಳಿಕ ದೆಹಲಿ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದರು. ಒಗ್ಗಟ್ಟಾಗಿ ಪ್ರತ್ಯೇಕ ಸಭೆ ನಡೆಸಿ ಮೂರು ದಿನವಾದರೂ ಇಲ್ಲಿಯವರೆಗೆ ಯಾವುದೇ ಮುಂಚೂಣಿ ನಾಯಕರನ್ನೂ ಮಿತ್ರ ಮಂಡಳಿ ಭೇಟಿ ಮಾಡಿಲ್ಲ.
ಇದನ್ನೆಲ್ಲ ನೋಡುವಾಗ ವಲಸಿಗರಿಗೆ, ಕಾಂಗ್ರೆಸ್, ಜೆಡಿಎಸ್ನಲ್ಲಿದ್ದ ಸ್ಥಿತಿಯೇ ಬಿಜೆಪಿಯಲ್ಲೂ ಸೃಷ್ಟಿಯಾಗಿದ್ಯಾ? ಬಿಜೆಪಿಯಲ್ಲಿ ತಮ್ಮ ಒಗ್ಗಟ್ಟು, ಪ್ರತ್ಯೇಕತೆ ಕಾಪಾಡಿಕೊಳ್ತಾರಾ ವಲಸಿಗರು? ಅಥವಾ ಗಾಳಿ ಬಂದೆಡೆ ತೂರಿಕೊಳ್ಳುವ ನಡೆ ಪ್ರದರ್ಶಿಸ್ತಾರಾ ಎಂಬ ಪ್ರಶ್ನೆ ಎದ್ದಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆಗೆ ಈ ಬಣ ರಾಜಕೀಯವೇ ಅಡ್ಡಿಯಾಗಿದ್ದು ಹೈಕಮಾಂಡ್ ನಡೆಯ ಮೇಲೆ ಕುತೂಹಲ ಮೂಡಿದೆ.