ನವಲಗುಂದ: ‘ಕಳಸಾ-ಬಂಡೂರಿ (ಮಹಾದಾಯಿ) ಯೋಜನೆಯ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಪರಿಸರ ಇಲಾಖೆಯ ಇವತ್ತು ಅನುಮತಿ ನೀಡಿದರೆ ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಳಸಾ- ಬಂಡೂರಿ ಯೋಜನಗೆ ಟೆಂಡರ್ ಆಹ್ವಾನಿಸಲಾಗಿದೆ. ಆದರೆ, ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಬೇಕಿದೆ, ಆ ಕೆಲಸವನ್ನು ಕೇಂದ್ರ ಸರ್ಕಾರದವರು ಮಾಡಬೇಕು. ಕೇಂದ್ರ ಸಚಿವ ಮತ್ತು ಇಲ್ಲಿನ ಸಂಸದ ಪ್ರಲ್ದಾಹ ಜೋಶಿ ಏನಪ್ಪಾ ಮಾಡುತ್ತಿದ್ದಿಯಾ ನೀನು?’ ಎಂದು ಅವರು ಪ್ರಶ್ನಿಸಿದರು.
‘ಪ್ರಲ್ಹಾದ ಜೋಶಿ ಅವರು ಅನುಮತಿ ಕೊಡಿಸಬೇಕು. ಜೋಶಿ ಅವರನ್ನು ನೀವು ಲೋಕಸಭೆಗೆ ಯಾಕೆ ಆಯ್ಕೆ ಮಾಡುತ್ತೀರಿ? ಅವರು ಕೆಲಸ ಮಾಡಲ್ಲ. ಕರ್ನಾಟಕ ಅಭಿವೃದ್ಧಿ ಬಗ್ಗೆ ಅವರು ತಲೆಕೆಡಿಸಿಕೊಳ್ಳಲ್ಲ. ರಾಜ್ಯದ 25 ಸಂಸದರು ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿಲ್ಲ’ ಎಂದು ಕುಟುಕಿದರು.
‘ಹಿಂದೊಮ್ಮೆ ಬಿ.ಎಸ್.ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದರು. ಗೋವಾ ಮುಖ್ಯಮಂತ್ರಿಯ ಪತ್ರವನ್ನು ಓದಿದ್ದರು. ಕಾಮಗಾರಿ (ಮಹದಾಯಿ ಯೋಜನೆ) ಶುರು ಮಾಡುತ್ತೇವೆ ಎಂದು ಹೇಳಿದ್ದರು. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಭರವಸೆ ನೀಡುತ್ತಾರೆ’ ಎಂದು ಗೇಲಿ ಮಾಡಿದರು.