ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಲ್ಲಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಕರಡು ಪಟ್ಟಿಗಳು ಮುಖ್ಯಮಂತ್ರಿ ಅವರ ಅನುಮೋದನೆಗೂ ಮುನ್ನವೇ ಸೋರಿಕೆಯಾಗಿವೆ.
ಇಲಾಖೆಯ ಹಿರಿಯ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳಲ್ಲಿ ಪಿಡಿಒ ವರ್ಗಾವಣೆಯ ಕರಡು ಪಟ್ಟಿಗಳನ್ನು ಹಂಚಿಕೊಳ್ಳಲಾಗಿದೆ. 223 ಪಿಡಿಒಗಳ ವರ್ಗಾವಣೆ ಪ್ರಸ್ತಾವಕ್ಕೆ ಅನುಮೋದನೆ ಕೋರಿ ಸಚಿವರು ಸಲ್ಲಿಸಿದ್ದ ಪಟ್ಟಿ ಆಗಸ್ಟ್ 21 ರಂದು ಸೋರಿಕೆಯಾಗಿತ್ತು. 40 ಪಿಡಿಒಗಳ ವರ್ಗಾವಣೆ ಆದೇಶದಲ್ಲಿ ಮಾರ್ಪಾಡು ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಮತ್ತೊಂದು ಪಟ್ಟಿ ಆಗಸ್ಟ್ 22 ರಂದು ಸೋರಿಕೆಯಾಗಿದೆ.
“ಸೋರಿಕೆಯಾದ ಪಟ್ಟಿಗಳನ್ನು ಬಳಸಿಕೊಂಡು ಪಿಡಿಒಗಳನ್ನು ಸಂಪರ್ಕಿಸುತ್ತಿರುವ ದಲ್ಲಾಳಿಗಳು, ‘ವ್ಯವಹಾರ’ ಕುದುರಿಸಲು ಯತ್ನಿಸುತ್ತಿದ್ದಾರೆ. ಇಲಾಖೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳ ಜೊತೆ ಮಾತುಕತೆಗೆ ವೇದಿಕೆ ಕಲ್ಪಿಸುವ ಭರವಸೆ ನೀಡುತ್ತಿದ್ದಾರೆ. ಸಚಿವರ ಕಚೇರಿಯಿಂದ ಮುಖ್ಯಮಂತ್ರಿಯವರಿಗೆ ಪ್ರತಿ ಬಾರಿ ಪ್ರಸ್ತಾವ ರವಾನೆ ಆದಾಗಲೂ ಇದೇ ಬೆಳವಣಿಗೆ ನಡೆಯುತ್ತಿದೆ” ಎಂದು ಕೆಲ ಪಿಡಿಒಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲಿ ಪಂಚಾಯತ್ ರಾಜ್ ಆಯುಕ್ತಾಲಯದಿಂದ ಸಚಿವರ ಕಚೇರಿಗೆ ಸಲ್ಲಿಸಿದ್ದ ಕರಡು ವರ್ಗಾವಣೆ ಪಟ್ಟಿಗಳು ಕೂಡ ಇಲಾಖೆಯ ಅಧಿಕಾರಿಗಳ ಗುಂಪಿನಲ್ಲೇ ಸೋರಿಕೆಯಾಗಿದ್ದವು. ಈಗ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ವರ್ಗಾವಣೆಗೂ ಮುನ್ನ ಮುಖ್ಯಮಂತ್ರಿಯವರ ಅನುಮೋದನೆ ಅಗತ್ಯ. ಸಚಿವರು ಸಲ್ಲಿಸಿರುವ ಪಟ್ಟಿಗಳು ಎರಡು ವಾರಗಳಿಂದ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಬಾಕಿ ಇವೆ. ಈಗ ಆ ಪಟ್ಟಿಗಳನ್ನೇ ಇಲಾಖೆಯ ಅಧಿಕಾರಿಗಳು ಸೋರಿಕೆ ಮಾಡಿದ್ದಾರೆ” ಎಂದು ದೂರಿದ್ದಾರೆ.