ಬೆಂಗಳೂರು: ಪ್ರತಿಷ್ಠೆಯ, ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಶುರು ಆಗಿದೆ. ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.
ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಪುರುಷ ಮತದಾರರು 1 ಲಕ್ಷದ 10 ಸಾವಿರದ 281 ಮಂದಿ ಇದ್ದರೆ, ಮಹಿಳಾ ಮತದಾರರು 1 ಲಕ್ಷದ 5 ಸಾವಿರದ 434 ಮಂದಿ ಇದ್ದು, ಒಟ್ಟು ಮತದಾರರು 2 ಲಕ್ಷದ 15 ಸಾವಿರದ 725 ಮಂದಿ ಇದ್ದಾರೆ. ಆರ್ ಆರ್ ನಗರದಲ್ಲಿ 4 ಲಕ್ಷದ 62 ಸಾವಿರ ಮಂದಿ ಮತದಾರರಿದ್ದಾರೆ.
ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್ನಲ್ಲಿರೋರು, ಕ್ವಾರಂಟೈನ್ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೋನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.