ಚಿಕ್ಕಮಗಳೂರು : ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿವೆ.
ಹೀಗಿದ್ದರೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರು, ಸರಿಯಾದ ರಸ್ತೆ ಸೇರಿದಂತೆ ಇನ್ನೂ ಅನೇಕ ಅಗತ್ಯ ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಹೊಸದೊಂದು ನಿದರ್ಶನ ಸಿಕ್ಕಿದೆ.
ಚಿಕ್ಕಮಗಳೂರಿನ ಅರಣ್ಯ, ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸರಿಯಾದ ರಸ್ತೆಗಳಿಲ್ಲ. ಔಷಧೋಪಚಾರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬೀದಿ ದೀಪಗಳಿಲ್ಲದೆ ಜನರು ಶೋಚನೀಯ ಜೀವನ ನಡೆಸುತ್ತಿದ್ದಾರೆ. ವಾಹನಗಳು ಓಡಾಡುವ ರಸ್ತೆಗಳಿಲ್ಲದ ಕಾರಣ ವಯೋವೃದ್ಧೆಯೊಬ್ಬರನ್ನು ಜನರು ಜೋಳಿಗೆಯಲ್ಲೇ ಹೊತ್ತು ಆಸ್ಪತ್ರೆಗೆ ಸೇರಿಸಿದ ಘಟನೆ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ಬುಧವಾರ ನಡೆಯಿತು.
70 ವರ್ಷ ವಯಸ್ಸಿನ ಶೇಷಮ್ಮರನ್ನು ಕುಟುಂಬಸ್ಥರು ಜೋಳಿಗೆಯಲ್ಲಿ ಕಟ್ಟಿ ಮೈಲಿಗಟ್ಟಲೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಡಂಚಿನ ಈ ಕುಗ್ರಾಮದಲ್ಲಿ ಹತ್ತಾರು ಮನೆಗಳಿವೆ. ಆದರೆ ಓಡಾಡಲು ಸೂಕ್ತ ರಸ್ತೆಯನ್ನು ಸರ್ಕಾರಗಳು ಇದುವರೆಗೂ ಕಲ್ಪಿಸಿಲ್ಲ. ಈ ಭಾಗದ ಜನರು, ನಾವು ಅರಣ್ಯ ಇಲಾಖೆಯ ಕಿರುಕುಳದಿಂದಲೂ ಬೇಸತ್ತು ಹೋಗಿದ್ದೇವೆ ಎನ್ನುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ರಸ್ತೆಗಳನ್ನು ಮಾಡಿಕೊಳ್ಳಲು ಬಿಡುತ್ತಿಲ್ಲವಂತೆ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಸ್ಥಳೀಯರ ಬೇಸರ. ಗ್ರಾಮಕ್ಕೆ ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರಸ್ತೆ ನಿರ್ಮಿಸಲು ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ.
ಗ್ರಾಮಕ್ಕೆ ಬೇಕಾಗಿರುವುದು ಕೇವಲ ಒಂದು ಕಿಲೋಮೀಟರ್ ರಸ್ತೆಯಷ್ಟೇ. ಆದರೆ ಇದುವರೆಗೂ ರಸ್ತೆಭಾಗ್ಯ ಕೂಡಿ ಬಂದಿಲ್ಲ. ಹೀಗಾಗಿ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿಯೇ ಬದುಕು ಸವೆಸುವಂತಾಗಿದೆ. ಕ್ಷೇತ್ರದ ನೂತನ ಶಾಸಕರು ಈ ಬಗ್ಗೆ ಗಮನಹರಿಸಬೇಕು. ಸೂಕ್ತ ರಸ್ತೆ ನಿರ್ಮಿಸಿಕೊಟ್ಟು ಈಚಲವಳ್ಳಿ ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟ ನಿವಾರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.