ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಇದಾಗಲೇ ವಿಚಾರಣೆಗೆ ಒಳಪಡಿಸಿದೆ. ರಾಹುಲ್ ಗಾಂಧಿ ಇದಾಗಲೇ ಕೆಲವು ಬಾರಿ ವಿಚಾರಣೆ ಎದುರಿಸುದ್ದರೆ, ಸೋನಿಯಾ ಅವರನ್ನು ನಿನ್ನೆ (ಗುರುವಾರ) ವಿಚಾರಣೆ ಮಾಡಲಾಗಿದೆ.
ತಮ್ಮ ಅತ್ತೆಯನ್ನು ಇ.ಡಿ. ವಿಚಾರಣೆಗೆ ಒಳಪಡಿಸಿರುವುದಕ್ಕೆ ಕಿಡಿ ಕಾರಿರುವ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅಗತ್ಯ ಉಂಟಾದರೆ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡ ಒಬ್ಬನೇ ಒಬ್ಬ ಬಿಜೆಪಿ ನಾಯಕನ ಹೆಸರನ್ನು ಹೇಳಿ ನೋಡೋಣ. ಪ್ರತಿ ಬಾರಿಯೂ ತನ್ನ ನೀತಿಗಳ ಬಗ್ಗೆ ದೇಶಕ್ಕೆ ಅಸಮಾಧಾನ ಉಂಟಾಗುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿ ಮೂಡಿದಾಗ, ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.
‘ಈ ರಾಷ್ಟ್ರದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ದೇಶದಲ್ಲಿ ಅಗತ್ಯವಿರುವ ಬದಲಾವಣೆಯನ್ನು ನಾನು ತರಬಲ್ಲೆ ಎಂದು ಜನರು ಭಾವಿಸಿದರೆ, ನಾನು ರಾಜಕೀಯಕ್ಕೆ ಪ್ರವೇಶಿಸುತ್ತೇನೆ’ ಎಂದಿದ್ದಾರೆ ರಾಬರ್ಟ್ ವಾದ್ರಾ.
ಜಾರಿ ನಿರ್ದೇಶನಾಲಯದಲ್ಲಿ ಸೋನಿಯಾ ಗಾಂಧಿ ಅವರ ಜತೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕುಟುಂಬದ ಜತೆಗಿದ್ದೇನೆ, ಆದರೆ ಇಡಿ ಕಚೇರಿಗೆ ಹೋಗಲು ಮತ್ತು ಸಮಸ್ಯೆ ಸೃಷ್ಟಿಸಲು ಬಯಸಿರಲಿಲ್ಲ. ಎಲ್ಲರನ್ನೂ ಬಂಧಿಸಿದರೆ, ಹೊರಗೆ ಇದ್ದು ಅನ್ಯಾಯದ ವಿರುದ್ಧ ಹೋರಾಡಲು ಯಾರೂ ಇರುವುದಿಲ್ಲ. ನಾನು ಸೋನಿಯಾ ಗಾಂಧಿ ಅವರಿಗೆ ತನಿಖಾ ಸಂಸ್ಥೆಯನ್ನು ಹೇಗೆ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದೆ. ಏಕೆಂದರೆ ನಾನು 15 ಬಾರಿ ಇ.ಡಿಗೆ ಹೋಗಿದ್ದೆ ಮತ್ತು 23,000 ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.