ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯ (Narayanapur Dam) ಈಗ ಭರ್ತಿಯಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 28.820 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 75 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಡಂಗೂರು ಸಾರಿ ಎಚ್ಚರಿಕೆ
ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಡಂಗೂರು ಸಾರಿ ಯಾವುದೇ ಕಾರಣಕ್ಕು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ತಿಂಥಣಿ, ರೊಟ್ನಡಗಿ, ನಾರಾಯಣಪುರ ಸೇರಿದಂತೆ ಮೊದಲಾದ ಕಡೆ ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತ ಕೂಡ ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಕೂಡ ಅಗತ್ಯ ಮುಂಜಾಗ್ರತೆ ವಹಿಸಿದೆ.
ಭೀಮಾ ನದಿಗೆ ಒಳಹರಿವು ಹೆಚ್ಚಳ
ಕೃಷ್ಣಾ ನದಿ ಜೊತೆ ಮಹಾರಾಷ್ಟ್ರದ ಮಹಾಮಳೆಗೆ ಭೀಮಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ಭರ್ತಿಯಾಗಿದ್ದು ಭೀಮಾನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ.
ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತಾ
ಕೃಷ್ಣಾ ಹಾಗೂ ಭೀಮಾನದಿ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ. ಕೃಷ್ಣಾ ಪ್ರವಾಹಕ್ಕೆ ಒಳಗಾಗುವ 45 ಗ್ರಾಮ ಹಾಗೂ ಭೀಮಾ ನದಿಯ ಪ್ರವಾಹಕ್ಕೆ 35 ಗ್ರಾಮಗಳು ಒಳಗಾಗುವ ಸಾಧ್ಯತೆ ಪಟ್ಟಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ಕೃಷ್ಣಾ ಹಾಗೂ ಭೀಮಾನದಿ ತೀರದ ಗ್ರಾಮಗಳಾದ ಗೋನಾಲ, ಶಿವಪುರ, ಜೋಳದಡಗಿ, ಶಿವನೂರು, ಬೆನಕನಹಳ್ಳಿ ಸೇರಿದಂತೆ ಮೊದಲಾದ ಖುದ್ದು ವಡಗೇರಾ ತಹಶಿಲ್ದಾರ ಸುರೇಶ ಅಂಕಲಗಿ ಅವರು ಭೇಟಿ ಪರಿಶೀಲನೆ ಮಾಡಿದ್ದಾರೆ. ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳದಂತೆ ಸೂಚಿಸಿದ್ದಾರೆ.
ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ವಡಗೇರಾ ತಹಶಿಲ್ದಾರ ಸುರೇಶ ಅಂಕಲಗಿ ಅವರು ಮಾತನಾಡಿ, ಕೃಷ್ಣಾ ಹಾಗೂ ಭೀಮಾನದಿಗೆ ಹೆಚ್ಚಿನ ನೀರು ಬರುತ್ತಿದ್ದು ನದಿ ತೀರದ ಗ್ರಾಮಸ್ಥರು ಯಾರು ಕೂಡ ನದಿಗೆ ತೆರಳದಂತೆ ಎಚ್ಚರ ವಹಿಸಬೇಕಿದೆ. ಪ್ರ ವಾಹ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಲಾಗಿದೆ ಎಂದರು. ಜಾನುವಾರು ತೆಗೆದುಕೊಂಡು ನದಿ ತೀರಕ್ಕೆ ತೆರಳದಂತೆ ಜನರು ಎಚ್ಚರಿಕೆಯಿಂದ ಇರಬೇಕೆಂದರು.
ಮುಂದುವರಿದ ಮಳೆಯ ಅಬ್ಬರ, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್