ತಮ್ಮ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ವಿರುದ್ಧ ಈ ಯುವಕ ಧ್ವನಿ ಎತ್ತಿದ್ದೆ ತಪ್ಪಾಯ್ತಾ..? ಈ ಯುವಕನಿಗೆ ಪೊಲೀಸರು ಕೊಡಬಾರದ ಚಿತ್ರಹಿಂಸೆ ಕೊಟ್ಟಿರುವ ಘಟನೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಹೌದು ಹೀಗೆ ನೀವು ನೋಡುತ್ತಿರುವ ಯುವಕನ ಹೆಸರು ಸಿದ್ದಪ್ಪ ಲಕ್ಷ್ಮಣ ಹಿರೂರ ಅಂತಾ, ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಯುವಕ ಈತ. ಈತ ತಮ್ಮ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಅದನ್ನು ತಡೆಗಟ್ಟಿ ಎಂದು ಸವದತ್ತಿ ತಹಶೀಲ್ದಾರ್ಗೆ ಫೋನ್ ಮಾಡಿ ತಿಳಿಸಿದ್ದಾರೆ. ಆದರೆ ತಹಶೀಲ್ದಾರ್ ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮರಳು ದಂಧೆಕೋರರ ಮಾತು ಕೇಳಿ ಈತನ ಮೇಲೆ ಸುಳ್ಳು ಕೇಸ್ ದಾಖಲಿಸಿ, 4 ದಿನ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆ, ಅಷ್ಟೇ ಅಲ್ಲದೇ ಕರೆಂಟ್ ಶಾಕ್ ಕೂಡ ಕೊಟ್ಟಿದ್ದಾರೆ.
ಇನ್ನು ಈತನ ಪಾಲಕರಿಗೂ ಕೂಡ ಪೊಲೀಸರು ಜೀವ ಬೆದರಿಕೆ ಹಾಕಿದ್ದಾರಂತೆ. ಇದರಿಂದ ಆಕ್ರೋಶಗೊಂಡಿರುವ ನೊಂದ ಯುವಕ ಸಿದ್ದಪ್ಪ ಲಕ್ಷ್ಮಣ ಹಿರೂರ ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು. ನನ್ನ ಮೇಲೆ ದೌರ್ಜನ್ಯ ಮಾಡಿರುವ ಸವದತ್ತಿ ತಹಶೀಲ್ದಾರ್ ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾನೆ.