ಹುಬ್ಬಳ್ಳಿ: ಈಗಾಗಲೇ ಹುಬ್ಬಳ್ಳಿ ನಗರ ವಾಯುಮಾಲಿನ್ಯದಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗಿದ್ದರೂ ಸಾರಿಗೆ ಸಂಸ್ಥೆ ಮತ್ತಷ್ಟು ಅವೈಜ್ಞಾನಿಕ ನಿರ್ಧಾರದ ಮೂಲಕ ಜನರ ಜೀವನದ ಜೊತೆಗೆ ಆಟವಾಡಲು ನಿರ್ಧರಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಬಿಎಂಟಿಸಿಯ ಗುಜರಿ ಬಸ್ ಖರೀದಿಗೆ NWKRTC ಮುಂದಾಗಿದೆ. ಬೆಂಗಳೂರಲ್ಲಿ ಓಡಿಸಿ ಬಿಟ್ಟಿರುವ 100 ಬಸ್ ಖರೀದಿಗೆ ಸಂಸ್ಥೆ ನಿರ್ಧರಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂರಾರು ಬಸ್ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದ್ದು, ಬಹುತೇಕ ಬಸ್ಗಳು ಲಕ್ಷಗಟ್ಟಲೆ ಕಿ.ಮೀ ಓಡಾಡಿವೆ ಎಂದು ತಿಳಿದುಬಂದಿದೆ.
ವಾಯುವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಚಿಕ್ಕೋಡಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ ಆರು ಜಿಲ್ಲೆಗಳ 9 ವಿಭಾಗಗಳು ಬರುತ್ತವೆ. ನಾಲ್ಕು ಸಾವಿರಕ್ಕೂ ಅಧಿಕ ಬಸ್ಗಳು ಸದ್ಯ ಸಂಚರಿಸುತ್ತಿವೆ. ಆದ್ರೂ ಸಂಸ್ಥೆಯ ವ್ಯಾಪ್ತಿಯಲ್ಲಿ ಸಮರ್ಪಕ ಬಸ್ ಸೇವೆ ಲಭ್ಯವಾಗುತ್ತಿಲ್ಲ. ಇದೀಗ ಹೊಸ ಬಸ್ ಖರೀದಿಸಲು ಸಂಸ್ಥೆಗೆ ಶಕ್ತಿ ಇಲ್ಲವಂತೆ. ಅದಕ್ಕಾಗಿ ಬಿಎಂಟಿಸಿಯಿಂದ ಹಳೆ ಬಸ್ಗಳನ್ನು ಅಂದರೆ ಅಲ್ಲಿ ಬಳಸಿ ಗುಜರಿಗೆ ಹಾಕಲು ನಿರ್ಧರಿಸಿರುವ ಬಸ್ಗಳನ್ನು ಇಲ್ಲಿಗೆ ತರಲು ನಿರ್ಧರಿಸಿದೆ.