ಕೋಲಾರ: ಅವರೆಲ್ಲಾ ಒಂದು ಕಾಲದಲ್ಲಿ ಚಿನ್ನದ ನೆಲದಲ್ಲಿ ರೌಡಿಸಂ ಹೆಸರಲ್ಲಿ ನೆತ್ತರು ಹಸಿದ್ದವರು, ಆದರೆ ಕಳೆದ ಎರಡು ದಶಕಳಿಂದ ರೌಡಿಸಂನಿಂದ ದೂರ ಉಳಿದಿದ್ದವರು ಏನು ಮಾಡುತ್ತಿದ್ದರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರೌಡಿಸಂನಿಂದ ಮೆರೆದಿದ್ದ ಕುಟುಂಬ ಈಗ ಗಾಂಜಾ ಘಾಟಿನಲ್ಲಿ ಮುಳುಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 186 ಕೆ.ಜಿ.ಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ರಾಬರ್ಟ್ಸನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 186 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಒಂದು ಕಾಲದಲ್ಲಿ ಕೆಜಿಎಫ್ನ್ನು ರೌಡಿಸಂ ಹೆಸರಲ್ಲಿ ನಡುಗಿಸಿದ್ದ ರೌಡಿ ತಂಗಂ ಸೋದರರಾದ ಜೋಸೆಫ್ ಹಾಗೂ ಪಲ್ಲರಾಜ್ ಈ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಸದ್ಯ ಪೊಲೀಸರಿಗೆ ಜೋಸೆಫ್ ಸಿಕ್ಕಿಬಿದ್ದಿದ್ದು ಮತ್ತೊಬ್ಬರ ಆರೋಪಿ ರಾಜ ಆಲಿಯಾಸ್ ಪಲ್ಲರಾಜ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಳೆದ ಎರಡುವರೆ ದಶಕಗಳಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರುಗಳು ಈಗ ಮತ್ತೆ ಡ್ರಗ್ಸ್ ಗಾಂಜಾ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಇವರು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಸಿಕ್ಕಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.