ಶಿವಮೊಗ್ಗ: 2023ರ ಚುನಾವಣೆ ಶಿವಮೊಗ್ಗ ಜಿಲ್ಲೆ ಪಾಲಿಗಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಿರ್ಗಮನದಿಂದ ತೆರವಾಗುವ ಕ್ಷೇತ್ರಗಳಿಗೆ ಮುಂದ್ಯಾರು?
ಬಣ ರಾಜಕಾರಣದಿಂದ ಕಂಗೆಟ್ಟಿರುವ ಕಾಂಗ್ರೆಸ್ ವರಿಷ್ಠರು ಇದಕ್ಕೆ ಮದ್ದು ಅರೆಯುವರೆ? ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದೇ? ಎಂಬುದೆಲ್ಲ ಚುನಾವಣೆಗೆ ವರ್ಷವಿರುವಾಗಲೇ ಚರ್ಚೆಗೆ ಗ್ರಾಸವಾಗಿದೆ.
ಉತ್ತರಾಧಿಕಾರಿ ಯಾರು?: ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಹಾಗಾದರೆ ಅವರ ಸ್ಥಾನಕ್ಕೆ ಯಾರು? ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿದ್ದು, ಮತ್ತೂಬ್ಬ ಪುತ್ರ ಬಿ.ವೈ.ವಿಜಯೇಂದ್ರ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದರೂ ಕೊನೇ ಗಳಿಗೆಯಲ್ಲಿ ಶಿಕಾರಿಪುರಕ್ಕೆ ಬಂದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ವಿಜಯೇಂದ್ರ ಬರದಿದ್ದರೆ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತಾರಾ ಅಥವಾ ಬಿಎಸ್ವೈ ಕುಟುಂಬಸ್ಥರನ್ನೇ ಕಣಕ್ಕಿಳಿಸಲಾಗುತ್ತಾ ಎಂಬ ಗುಟ್ಟು ರಟ್ಟಾಗಿಲ್ಲ. ಇನ್ನು 10-20 ಸಾವಿರ ಮತಗಳಿಂದ ಸೋಲು ಕಾಣುತ್ತಿರುವ ಕಾಂಗ್ರೆಸ್ಗೆ ಈ ಬಾರಿ ವಿಜಯಲಕ್ಷ್ಮೀ ಒಲಿಯುವುದೆ ನೋಡಬೇಕಿದೆ. ಗೋಣಿ ಮಾಲತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಇಲ್ಲಿ ಲೆಕ್ಕಕಿಲ್ಲ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಈಗಾಗಲೇ 74 ವರ್ಷ ಪೂರೈಸಿದ್ದು ಬಿಜೆಪಿಯ ಅಲಿಖೀತ ನಿಯಮದ ಪ್ರಕಾರ ಟಿಕೆಟ್ನಿಂದ ವಂಚಿತರಾಗುವ ಸಾಧ್ಯತೆಯಿದೆ. ತಮ್ಮ ಜಾಗಕ್ಕೆ ಪುತ್ರ ಕಾಂತೇಶ್ರನ್ನು ಕೂರಿಸಲು ಒಂದು ಪ್ರಯತ್ನ ನಡೆಸಲಾಗುತ್ತಿದೆ. ಲಿಂಗಾಯತರೇ ಹೆಚ್ಚಾಗಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕೆಂದು ಒಂದು ಬಣ ಒಳಗೊಳಗೇ ಸಭೆ ನಡೆಸುತ್ತಿದೆ. ಈ ಕ್ಷೇತ್ರವು ಆರ್ಎಸ್ಎಸ್ ಹಿಡಿತದಲ್ಲಿರುವುದರಿಂದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಸೂಚಿಸಿ ದವರೆ ಅಭ್ಯರ್ಥಿಯಾಗಬಹುದು. ಕಾಂಗ್ರೆಸ್ನಿಂದ ಮಾಜಿ ಶಾಸಕ ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದ ರೇಶ್, ಪಾಲಿಕೆ ಸದಸ್ಯ ಯೋಗೀಶ್ ಆಕಾಂಕ್ಷಿ ಗಳಾಗಿದ್ದಾರೆ. ಜೆಡಿಎಸ್ನಿಂದ ಎಂ.ಶ್ರೀಕಾಂತ್ ಸ್ಪರ್ಧಿಸುತ್ತಾರಾ ಅಥವಾ ಕಾಂಗ್ರೆಸ್ಗೆ ಹೋಗುತ್ತಾರಾ ಕಾದು ನೋಡಬೇಕಿದೆ.