ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಮುಂಜಾನೆ 7.30ಕ್ಕೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ರಾಜ್ಕುಮಾರ್ ಕುಟುಂಬದವರು ಈಡೀಗ ಸಂಪ್ರದಾಯದಂತೆ ಕಾರ್ಯ ನೆರವೇರಿಸಿದ್ದಾರೆ. ತಂದೆ ಡಾ. ರಾಜ್ಕುಮಾರ್, ತಾಯಿ ಪಾರ್ವತಮ್ಮ ಸಮಾಧಿಯ ಪಕ್ಕದಲ್ಲೇ ಪುನೀತ್ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಗಿದೆ. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ ರಾಜಕುಮಾರ ತಮ್ಮ ಸಾವಿನ ಬಳಿಕ ಅಮರರಾಗಲಿದ್ದಾರೆ. ಪುನೀತ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ಪುನೀತ ರ ಈ ಆದರ್ಶ ವನ್ನೆ ಮಾದರಿ ಮಾಡಿಕೊಂಡ ಬಸವನಾಡು ವಿಜಯಪುರ ನಗರದಲ್ಲಿ ಯುವ ಭಾರತ ಸಮಿತಿ, ಮಠಪತಿ ಗಲ್ಲಿಯ ಶ್ರೀ ಆದಿಶಕ್ತಿ ತರುಣ ಸಂಘ ಹಾಗೂ ಮಠಪತಿ ಗಲ್ಲಿ ಯುವಕರ ಬಳಗದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ನೇತ್ರದಾನದ ವಾಗ್ದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಐವತ್ತು ಹೆಚ್ಚು ಯುವಕರು ಭಾಗಿಯಾಗಿ ರಕ್ತದಾನ ಮಾಡಿದರು. ಹಾಗೂ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು.ಇದರಲ್ಲಿ 40 ಕ್ಕೂ ಹೆಚ್ಚು ಯುವಕರು ತಮ್ಮ ಸಾವಿನ ಬಳಿಕ ನೇತ್ರದಾನ ಮಾಡುವ ವಾಗ್ದಾನ ಮಾಡಿದ್ರೆ 35 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಅಪ್ಪುವಿಧಿವಶ ಹಿನ್ನಲೆ ವಿಜಯಪುರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು ಪುನೀತರಾಜಕುಮಾರ ಫ್ಲೆಕ್ಸ್ ಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿ, ಐದು ತರಹದ ಹಣ್ಣುಗಳನ್ನು ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಪುನೀತ ರ ಕಾರ್ಯಗಳನ್ನು ನೆನೆಯಲಾಯಿತು. ಇದೇ ಸಂದರ್ಭದಲ್ಲಿ ಪುನೀತ ಸಾವಿನಿಂದ ಕೆಲ ಯುವಕರು ಆತ್ಮಹತ್ಯೆ, ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ, ಯುವಕರು ಮತ್ತೊಬ್ಬರಿಗೆ ಮಾದರಿಯಾಗೋಣ, ನೇತ್ರದಾನ ಹಾಗೂ ರಕ್ತದಾನ ದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪ್ಪುವಿನ ಹಾದಿಯಲ್ಲೇ ಸಾಗೋಣ ಎಂದು ಕರೆ ನೀಡಿದರು.
ಒಟ್ನಲ್ಲಿ ಸತ್ತ ಬಳಿಕ ಮಣ್ಣಿನಲ್ಲಿ ಮಣ್ಣಾಗುವ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ ಎಂಬ ಮಹತ್ವಾಕಾಂಕ್ಷೆ ಕಾರ್ಯದ ಮೂಲಕ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಗುಮ್ಮಟನಗರಿ ಯುವಕರ ಕಾರ್ಯ ನಿಜಕ್ಕೂ ಮಾದರಿ ಹಾಗೂ ಶ್ಲಾಘನೀಯವಾಗಿದೆ.