ವಿಜಯಪುರ/ ಹಾವೇರಿ; ಇವತ್ತು ಸಿಂದಗಿ ಮತ್ತು ಹಾನಗಲ್ (Sindagi, Hangal By Election) ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಬೆಳಗ್ಗೆ ನೀರಸವಾಗಿ ಮತದಾನ ಕಂಡು ಬಂದ್ರೂ 10 ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸುತ್ತಿದ್ದಾರೆ. ಗಂಟೆಯಿಂದ ಗಂಟೆಗೆ ಶೇಕಡಾವಾರು ಮತದಾನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಜೊತೆಗೆ ಮತದಾನ (Voting)ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಮೂರು ಬೂತ್ ಗಳಲ್ಲಿ ಇವಿಎಂ ಯಂತ್ರ (EVM) ಕೈಕೊಟ್ಟ ಪರಿಣಾಮ ಮತದಾನ ತಡವಾಗಿ ಆರಂಭವಾಯ್ತು. ಇನ್ನುಳಿದಂತೆ ಎರಡೂ ಕ್ಷೇತ್ರಗಳ ಎಲ್ಲ ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ. ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಮತ್ತು ಚಿಹ್ನೆ ಮತ ಸಂಖ್ಯೆ ಚೀಟಿ ನೀಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಗಲಾಟೆ ನಡೆಸಿದ್ದರು. ಘಟನಾ ಸ್ಥಳಕ್ಕಾಗಮಿಸಿದ ಚುನಾವಣಾ ಅಧಿಕಾರಿಗಳು (Election Officers) ಹಂಚುತ್ತಿದ್ದ ಗುರುತಿನ ಚೀಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲಕಾಲ ಮತಗಟ್ಟೆ ವ್ಯಾಪ್ತಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸಿಂದಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು, ಕುಟುಂಬ ಸಮೇತರಾಗಿ ಹನುಮಾನ್ ಮತ್ತು ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಮಾತನಾಡಿದ ರಮೇಶ್ ಭೂಸನೂರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ನಾನು ಸೋತಿದಕ್ಕೆ ಜನರು ಈ ಬಾರಿ ನನ್ನ ಮೇಲೆ ಅನುಕಂಪ ತೋರಿಸಿ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ನವರ ಅನುಕಂಪ ಈ ಬಾರಿ ವರ್ಕೌಟ್ ಆಗೋದಿಲ್ಲ. ಕಳೆದ ಬಾರಿಯೆ ಎಂ ಸಿ ಮನಗೋಳಿಯವರು ಕೊನೆ ಚುನಾವಣೆ ಅಂತಾ ಅನುಕಂಪ ಗಿಟ್ಟಿಸಿಕೊಂಡು ಆಯ್ಕೆಯಾಗಿದ್ದರು. ಆದ್ರೆ ಈ ಬಾರಿ ಜನ ಬಿಜೆಪಿ ಪರ ಒಲವು ತೋರಿದ್ದಾರೆ ಗೆದ್ದು ಬಂದ ಮೇಲೆ ಕ್ಷೇತ್ರದ ಅಭಿವೃದ್ಧಿಯೆ ನನ್ನ ಮೊದಲ ಗುರಿ ಎಂದು ಹೇಳಿದರು.