ಬೆಂಗಳೂರು: ‘ವಿಧಿಯಾಟದಿಂದ ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದರು. ನಾನು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳಿದೆ. ಆದರೆ ಗುಲಾಮ್ ನಬಿ ಅಝಾದ್ ಅವರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂತ ಒತ್ತಾಯ ಮಾಡಿದರು’ ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು.
‘ಬಜೆಟ್ ನಲ್ಲಿ ಸಾಲ ಮನ್ನಾ ಮಾಡಲು ಹಣ ಮೀಸಲಿಡುವ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಸಿದ್ದರಾಮಯ್ಯ ಅವರು ತಾವು ಘೋಷಣೆ ಮಾಡಿದ್ದ ಎಲ್ಲ ಭಾಗ್ಯಗಳಿಗೆ ಹಣ ಮೀಸಲಿಟ್ಟು ಸಾಲ ಮನ್ನಾ ಮಾಡಿ ಎಂದು ಹೇಳಿದರು. ಹಾಗಾಗಿ ಎಲ್ಲದಕ್ಕೂ ಹಣ ಮೀಸಲಿಟ್ಟು ಕುಮಾರಸ್ವಾಮಿ ಎರಡು ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಿ ಅವರ ಅಕೌಂಟ್ ಗೆ ನೇರವಾಗಿ ಹಣ ಹಾಕಿದರು ಎಂದರು.
ಕುಮಾರಸ್ವಾಮಿ ಎಲ್ಲ ರೈತರ 2 ಲಕ್ಷದವರೆಗೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದಾಗ ನನಗೆ ಸಂಶಯ ಮೂಡಿತ್ತು. ಇಷ್ಟೊಂದು ಸಂಪನ್ಮೂಲ ಎಲ್ಲಿಂದ ತರುತ್ತಾನೆ ಎಂದು ಸಂಶಯ ಮೂಡಿತ್ತು ಎಂದು ದೇವೇಗೌಡರು ಹೇಳಿದರು.
ಬಿಜೆಪಿಗಾಗಿ ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ: ಎರಡು ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿರುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ನಾರಾಯಣರಾವ್ ನನ್ನ ಶಿಷ್ಯ ಆವರನ್ನು ಜಾತಿ ಮೇಲೆ ಬೆಳೆಸಲಿಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲೀಮರಿದ್ದಾರೆ. ಅದಕ್ಕೆ ಅನಿವಾರ್ಯ ಕಾರಣದಿಂದ ಅವರನ್ನು ನಿಲ್ಲಿಸಬೇಕಾಯಿತು. ನಾನು ಜಾತಿ ಮೇಲೆ ಯಾರನ್ನೂ ಬೆಳೆಸಿಲ್ಲ. ಸಿಂಧಗಿಯಲ್ಲಿ ಎಂ.ಸಿ. ಮನಗೂಳಿಗೆ ನಾನೇ ಟಿಕೆಟ್ ಕೊಡಿಸಿದ್ದೆ. ಅವರ ವಿರುದ್ಧ ಕಾಗ್ರೆಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದರು. ಆಗ ಮನಗೂಳಿಯನ್ನು ಗೆಲ್ಲಿಸಿಕೊಂಡು ಬಂದೆ. ಸಿಂದಗಿಗೆ ಕುಡಿಯುವ ನೀರು ಕೊಡಿಸಿದ್ದಕ್ಕೆ ನನ್ನ ಪ್ರತಿಮೆ ಮಾಡಿಸಿದರು. ನಾವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಡಿ ಎಂದು ಕೇಳಿದ್ದೇನೆ ಎಂದರು.
ಮುಸ್ಲೀಮರನ್ನೇನು ಇವರು ಗುತ್ತಿಗೆ ಪಡೆದಿದ್ದಾರಾ? ಕಾಂಗ್ರೆಸ್ ನವರು ಎಷ್ಟು ಜನ ಮುಸ್ಲೀಮರಿಗೆ ಅವಕಾಶ ಕೊಟ್ಟಿದ್ದಾರೆ, ರೆಹಮಾನ್ ಖಾನ್ ಏನಾದರು? ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ ನಾನು ವಿಜಯಪುರದಲ್ಲಿ ಇರುತ್ತೇನೆ. ಜೆಡಿಎಸ್ ನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಎಚ್ ಡಿಡಿ ಪ್ರಶ್ನಿಸಿದರು.
ರಾಮನಗರ ಮಂಡ್ಯ, ಹಾಸನದಲ್ಲಿ ಸರಿಯಾದ ಮುಸ್ಲಿಂ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಗಾಗಿ ಅವರನ್ನು ಎಂ ಎಲ್ ಸಿ ಮಾಡಿದ್ದೇವು. ಸಿದ್ದರಾಮಯ್ಯ ಅವರನ್ನು ಕೇಳಿ ಮಾಡಿಲ್ಲ. ಇಬ್ರಾಹಿಮ್ ಅವರನ್ನು ಕಾಂಗ್ರೆಸ್ ನ ಯೂತ್ ಪ್ರೆಸಿಡೆಂಟ್ ಮಾಡಿದ್ದು ನಾನೇ. ನಾನು ಸಿಎಂ ಆದ ತಕ್ಷಣ ಅವರನ್ನು ರಾಜ್ಯ ಸಭೆಗೆ ನೇಮಕ ಮಾಡಿದೆ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ನಮಗೂ ಆರ್ ಎಸ್ಎಸ್ ಗೂ ಸಂಬಂಧವಿಲ್ಲ: ಆರ್ ಎಸ್ ಎಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾವು ಅಡ್ವಾಣಿಯವರು ಒಂದು ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವು. ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಯೋಜನೆ ಮಾಡಲಾಗಿತ್ತು. ಆರ್ ಎಸ್ಎಸ್ ನ ಆಗಿನ ಪರಿಸ್ಥಿತಿಯೇ ಬೇರೆ. ಅವತ್ತಿನ ಕಾರ್ಯಕ್ರಮದಲ್ಲಿ ಏನು ಹೇಳಬೇಕೋ ಹೇಳಿದ್ದೇನೆ. ಆದರೆ ಬೆಂಬಲ ಕೊಟ್ಟಿದ್ದೇನೆ ಎಂದರೆ ಏನು ಹೇಳುವುದು. ವಾಜಪೇಯಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ನಮಗೂ ಆರ್ ಎಸ್ಎಸ್ ಗೂ ಏನು ಸಂಬಂಧ ಇಲ್ಲ ಎಂದು ಅವರು ಹೇಳಿದರು.
ಬೊಮ್ಮಾಯಿ ಸರ್ಕಾರದ ಬಗ್ಗೆ ಒಳ್ಳೆಯ ಮಾತನಾಡಿದರೆ ಅದಕ್ಕೊಂದು ಅಭಿಪ್ರಾಯ ಬರುತ್ತದೆ. ಸರಿ ಇಲ್ಲ ಎಂದರೆ ಅದಕ್ಕೊಂದು ಅಭಿಪ್ರಾಯ ಬರುತ್ತದೆ. ನನ್ನ ಮನೆಗೆ ಬಂದಾಗ ಹೈ ಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರನ್ನೂ ಚೆನ್ನಾಗಿ ನೋಡಿಕೊಂಡು ಆಡಳಿತ ನಡೆಸುವಂತೆ ಸೂಚಿಸಿದ್ದೇನೆ ಎಂದು ದೇವೇಗೌಡರು ಹೇಳಿದರು.