ಮೈಸೂರು: ನಾಡ ಹಬ್ಬ ದಸರಾ ಉದ್ಘಾಟಕರ ಹೆಸರು ಘೋಷಣೆಯಾಗಿದೆ. ಈ ಬಾರಿ ನಡೆಯಲಿರುವ ದಸರಾ ಹಬ್ಬವನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಉದ್ಘಾಟಿಸಲಿದ್ದಾರೆ.
ಇಂದು (ಸೆ.28) ಸಂಜೆ ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ರವರಿಗೆ ಆಹ್ವಾನ ನೀಡಲು ರಾಜ್ಯಸರ್ಕಾರ ನಿರ್ಧರಿಸಿದೆ.
ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ದಸರಾ ಹಬ್ಬಕ್ಕೆ ಸಾಂಸ್ಕೃತಿಕ ಮೈಸೂರು ಸರ್ವರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಬೆಳಕಿನಲ್ಲಿ ಕಂಗೊಳಿಸಲು ಅರಮನೆ ವಿದ್ಯುತ್ ಬಲ್ಬ್ಗಳು ರೆಡಿಯಾಗುತ್ತಿವೆ.
ಅರಮನೆ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಆರಂಭವಾಗಿದೆ. ವಿದ್ಯುತ್ ದೀಪ ಹೊತ್ತಿಸಿ, ಬಲ್ಬ್, ಹೋಲ್ಡರ್, ವೈರಿಂಗ್ ಅನ್ನು ಎಲೆಕ್ಟ್ರಿಷಿಯನ್ಸ್ ಸರಿಪಡಿಸುತ್ತಿದ್ದಾರೆ. ಕ್ರೇನ್ ಸಹಾಯದಿಂದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಒಡೆದು ಹೋಗಿರುವ ಬಲ್ಬ್ಗಳನ್ನು ತೆರವುಗೊಳಿಸಿ ಹೊಸ ಬಲ್ಬ್ಗಳನ್ನು ಅಳವಡಿಸಲಾಗುತ್ತಿದೆ.
ಅ.1ಕ್ಕೆ ಸಿಂಹಾಸನ ಜೋಡಣೆ
ಅಕ್ಟೋಬರ್ 1 ಶುಕ್ರವಾರ ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಅದಕ್ಕೂ ಮುನ್ನ ಹೋಮ ಹವನ ನಡೆಯಲಿದೆ. ಇನ್ನು ಖಾಸಗಿ ದರ್ಬಾರ್ ಹಾಲ್ ನಲ್ಲಿ ಈ ಜೋಡಣೆ ಕಾರ್ಯ ನಡೆಯಲಿದ್ದು, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಅಂದು ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.