ಉಡುಪಿ: ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆಯುತ್ತಿದೆ. ಕಡೆಗೋಲು ಶ್ರೀಕೃಷ್ಣನ ಊರು ಉಡುಪಿಯಲ್ಲಿ ಈ ಬಾರಿ ಅಷ್ಟಮಿ ಆಚರಣೆ ನಡೆದಿಲ್ಲ. ಉಡುಪಿ ಮಠದಲ್ಲಿ ಸೌರಮಾನ ಪದ್ಧತಿ ಆಚರಣೆ ಮಾಡುವುದರಿಂದ, ಮುಂದಿನ ತಿಂಗಳು ಶ್ರೀಕೃಷ್ಣಜನ್ಮಾಷ್ಟಮಿ ನಡೆಯಲಿದೆ.
ದೇಶದಲ್ಲಿ ಆಚರಣೆ ಇರುವುದರಿಂದ ಉಡುಪಿ ಕಡೆಗೋಲು ಕೃಷ್ಣನಿಗೆ, ವಿಶೇಷ ಅಲಂಕಾರ ಮಾಡಲಾಗಿದೆ. ಗೋಪಾಲಕೃಷ್ಣ ನಾಗಿ ಕಡೆಗೋಲು ಕೃಷ್ಣ ದರ್ಶನ ಕೊಟ್ಟಿದ್ದಾನೆ.ಚಾಂದ್ರಮಾನ ಪದ್ಧತಿಯಲ್ಲಿ ಹಬ್ಬಗಳನ್ನು ಆಚರಿಸುವ ಸಮುದಾಯಗಳು ಉಡುಪಿಯಲ್ಲಿದೆ. ಅವರೆಲ್ಲಾ ಅಷ್ಟಮಿ ಆಚರಣೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದ ಕಡೆಗೋಲು ಶ್ರೀಕೃಷ್ಣನ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಗೋಪಾಲಕೃಷ್ಣನಾಗಿ ಕಡೆಗೋಲ ಕೃಷ್ಣ ಅವತಾರ ಎತ್ತಿದ್ದ. ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷವಾದ ಅಲಂಕಾರವನ್ನು ನೆರವೇರಿಸಿದರು. ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಕಾಡಿನಲ್ಲಿ ಗೋವನ್ನು ಮೇಯಿಸುವ ಶ್ರೀಕೃಷ್ಣನಾಗಿ ಉಡುಪಿ ಕಡೆಗೋಲು ಕೃಷ್ಣ ಇಂದು ಭಕ್ತರಿಗೆ ದರ್ಶನ ಕೊಡುತ್ತಿದ್ದಾನೆ. ಶ್ರೀಕೃಷ್ಣ, ಮುಖ್ಯಪ್ರಾಣ ದೇವರುಗಳು, ಗರುಡ ದೇವರಿಗೆ ಅಲಂಕಾರಗಳನ್ನು ಮಾಡಿ ಅದಮಾರು ಮಠ ಫೋಟೋಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 11ರಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಕೊರೊನಾ ಲಾಕ್ಡೌನ್ ನಂತರ ಉಡುಪಿ ಕೃಷ್ಣಮಠ ಭಕ್ತರಿಗೆ ತೆರೆದುಕೊಂಡಿಲ್ಲ. ಮುಂದಿನ ಪರಿಸ್ಥಿತಿಗಳನ್ನು ನೋಡಿ ಶ್ರೀಕೃಷ್ಣ ಮಠವನ್ನು ತೆರೆಯುವುದು, ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಪರ್ಯಾಯ ಅದಮಾರು ಮಠ ತೀರ್ಮಾನ ತೆಗೆದುಕೊಳ್ಳಲಿದೆ.