ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪ್ರವಾಹದಿಂದ 7800 ಕೋಟಿ ರೂಪಾಯಿ ಹಾನಿ ಆಗಿದೆ ಎಂದು ನೆರೆಪರಿಹಾರ ಕಾಮಗಾರಿ, ಕೊವಿಡ್ ನಿರ್ವಹಣೆ ಪರಿಶೀಲನೆ ಸಭೆ ಬಳಿಕ ಇಂದು (ಆಗಸ್ಟ್ 6) ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಈ ಬಾರಿ 51 ಕಾಳಜಿ ಕೇಂದ್ರಗಳಲ್ಲಿ 38 ಸಾವಿರ ಜನ ಆಶ್ರಯ ಪಡೆದಿದ್ದಾರೆ. ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಜನರು, ಜಾನುವಾರುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಎಂಟು ಹತ್ತು ದಿನ ಕಾಳಜಿ ಕೇಂದ್ರದಲ್ಲಿ ಇರಲು ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಬೆಳಗಾವಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಸೇರಿದ 560 ಕಿ.ಮೀ ಹಳ್ಳಿ ರಸ್ತೆ ಹಾಳಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 300 ಕಿ.ಮೀ ರಸ್ತೆ ಕೊಚ್ಚಿ ಹೋಗಿದೆ, 70 ಸೇತುವೆಗಳಿಗೆ ಹಾನಿಯಾಗಿದೆ. 1340 ಕೋಟಿ ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿಯಾಗಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 7800 ಕೋಟಿ ಹಾನಿಯಾಗಿದೆ ಎಂದು ಕಾರಜೋಳ ಮಾಹಿತಿ ನೀಡಿದ್ದಾರೆ.
ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕೊಡಲು ಡಿಸಿಗೆ ಸೂಚನೆ ನೀಡಲಾಗಿದೆ. ಎಸ್ಡಿಆರ್ಎಫ್ ಗೈಡ್ಲೈನ್ನಲ್ಲಿ ಪರಿಹಾರ ಒದಗಿಸಲು ಸೂಚನೆ ಕೊಡಲಾಗಿದೆ. ಯಾವುದೇ ಕಾರಣಕ್ಕೂ ಜನರ ಕೈಗೆ ಚೆಕ್, ಹಣ ಕೊಡಲ್ಲ. ಆರ್ಟಿಜಿಎಸ್ ಮೂಲಕ ಹಣ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹದಲ್ಲಿ 21300 ಕೆಇಬಿ ಪೋರ್ಚ್ಗಳು ನೀರಿನಲ್ಲಿ ಮುಳುಗಿವೆ. ಒಟ್ಟು 5300 ಟ್ರಾನ್ಸ್ಫಾರ್ಮ್ಗಳು ನೀರಿನಲ್ಲಿ ಮುಳುಗಿ ಹೋಗಿವೆ ಎಂದೂ ಗೋವಿಂದ ಕಾರಜೋಳ ಹೇಳಿದ್ದಾರೆ.
ನಾಳೆ ಚಿಕ್ಕೋಡಿ ಭಾಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಖಾತೆಯಲ್ಲಿ 92 ಕೋಟಿ ಹಣ ಇದೆ. ತುರ್ತಾಗಿ ಉಪಯೋಗಿಸಲು ಅವಕಾಶ ಇದೆ. ತುರ್ತು ದುರಸ್ತಿ ಕಾರ್ಯಕ್ಕೆ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೋಳಿ ಫಾರಂಗಳಿಗೆ ಅಪಾರ ಹಾನಿಯಾಗಿದ್ದು 7350 ಕೋಳಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರತಿ ಕೋಳಿಗೆ 50 ರೂಪಾಯಿ ಪರಿಹಾರ ಬಿಡುಗಡೆ ಆಗುತ್ತೆ. ಪ್ರವಾಹದಿಂದ ಜಾನುವಾರುಗಳ ಒಣಮೇವು ಕೊಚ್ಚಿಕೊಂಡು ಹೋಗಿದ್ದು ಹಸಿಮೇವು ವ್ಯವಸ್ಥೆಗೆ ಸೂಚನೆ ಕೊಡಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಾರ ಹಣ ಬಿಡುಗಡೆ ಮಾಡಿದೆ. ಆದರೆ ಆಯಕ್ಚುಯಲ್ ಲಾಸ್ಗೂ, ಎನ್ಡಿಆರ್ಎಫ್ ಗೈಡ್ಲೈನ್ಸ್ಗೂ ವ್ಯತ್ಯಾಸ ಇದೆ ಎಂದು ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನನಗೆ ಯಾವ ಖಾತೆ ಸಿಗುತ್ತೆ ಅದನ್ನು ನಿರ್ವಹಿಸುತ್ತೇನೆ
ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ. ನನಗೆ ಏನು ಕೊಡ್ತಾರೆ ಅದನ್ನ ಮಾಡ್ತೇನೆ. ನಮ್ಮ ಸಚಿವ ಸಂಪುಟ ಶಾಂತಿ, ಸೌಹಾರ್ದತೆಯಿಂದ ಆಗಿದ್ದಕ್ಕೆ ಸಿದ್ದರಾಮಯ್ಯಗೆ ನಿರಾಸೆ ಆಗಿದೆ. ನಿರಾಸೆ ಆದ ಕಾರಣಕ್ಕೆ ಅವರು ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಸಂಪುಟದ ಬಗ್ಗೆ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 10 ಲಕ್ಷ ಜನರಿಗೆ ಕೊವಿಡ್ ಎರಡನೇ ಡೋಸ್ ಲಸಿಕೆ ನೀಡಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಕೋವ್ಯಾಕ್ಸಿನ್ ಲಸಿಕೆಯೂ ಲಭ್ಯವಿದೆ ಎಂದು ಅವರು ಜಿಲ್ಲೆಯ ವಿಚಾರಗಳ ಬಗ್ಗೆ ವಿವರಣೆ ನೀಡಿದ್ದಾರೆ.