ಕೊಡಗು(ಜು.06): ಮಾರಕ ಕೊರೋನಾ ವೈರಸ್ ಪ್ರತಿಯೊಬ್ಬರ ಜೀವನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭೂಕುಸಿತದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕುಟುಂಬ ಲಾಕ್ಡೌನ್ನಿಂದ ಕೂಲಿಯನ್ನು ಕಳೆದುಕೊಂಡು ಒಂದೊತ್ತಿನ ಗಂಜಿಗೂ ಪರಿಪಾಟಲು ಪಡುತ್ತಿದೆ. ಹಲವು ಕಾಯಿಲೆಗಳಿಂದ ನರಳುವ ತಂದೆ ತಾಯಿಯನ್ನು ಸಾಕೋದು ಪಿಯುಸಿ ಓದುತ್ತಿದ್ದ ಮಗನ ಹೆಗಲಿಗೆ ಬಿದ್ದಿದೆ. ಅಂತಹ ಮನಕಲಕುವ ಕಥೆ ವ್ಯವಸ್ಥೆಯನ್ನು ನೋವು ನೋಡ್ಲೇಬೇಕು.
Ρ
ಕಣ್ಣು ಕಾಣದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲು ಸಾಧ್ಯವಾಗದ ತಂದೆ, ಸಂಧಿವಾತದಿಂದ ಕೈ ಕಾಲುಗಳು ಜೋಮು ಹಿಡಿದು ಓಡಾಡಲು ಪರದಾಡುವ ವೃದ್ಧ ತಾಯಿ. ಮನೆ ಇಲ್ಲದೆ ಪ್ಲಾಸ್ಟಿಕ್ ಟಾರ್ಪಲ್ ಕಟ್ಟಿ ಸೀಟು ಹಾಕಿರುವ ಗುಡಿಸಲ್ಲಿ ವಾಸ. ಸರ್ಕಾರ ಕೊಡುವ ಅಕ್ಕಿಯಿಂದ ಗಂಜಿ ಮಾಡಿ ಕುಡಿದರೆ ಅದೇ ಊಟ ಎಂದು ಬದುಕುತ್ತಿರುವ ಇಂತಹ ಶೋಚನೀಯ ಕುಟುಂಬ ಇರೋದು ಕರ್ನಾಟಕದ ಕಾಶ್ಮೀರ ಮತ್ತು ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗಿನಲ್ಲಿ.
ಹೌದು, ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಂಗೊಲ್ಲಿ ಗ್ರಾಮದ ಪ್ರೇಮ ಮತ್ತು ಕಣ್ಣನ್ ದಂಪತಿಯ ಕುಟುಂಬ. ಹೌದು ಎರಡು ವರ್ಷಗಳ ಮುಂಚೆ ಸಣ್ಣದೊಂದು ಮನೆಯಲ್ಲಿ ಹೇಗೋ ಜೀವನ ನಡೆಸುತ್ತಿದ್ದ ಕುಟುಂಬ 2018ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಮನೆ ನೆಲಸಮವಾಗಿತ್ತು. ಅಂದಿನಿಂದ ಹೇಗೋ ಕೂಲಿ ನಾಲಿ ಮಾಡುತ್ತಿದ್ದ ಕುಟುಂಬದ ಯಜಮಾನ ಕಣ್ಣನ್ ಅವರಿಗೆ ಇದ್ದಕ್ಕಿದ್ದಂತೆ ಕಣ್ಣು ಕಾಣಿಸದಂತೆ ಆಗಿತ್ತು. ಅಂದಿನಿಂದ ಮನೆಯ ಆಧಾರ ಸ್ಥಂಭವೇ ಇಲ್ಲದಂತೆ ಆಗಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೆ ಪಿಯುಸಿ ಓದುತ್ತಿದ್ದ ಮಗ ಜನಾರ್ಧನ್ ಕಾಲೇಜು ಬಿಟ್ಟು ಕೂಲಿ ಮಾಡಿ ಅಪ್ಪ ಅಮನ್ನನ್ನು ಸಾಕುತ್ತಿದ್ದ. ಆದರೆ ದೇಶದ್ಯಂತ ಗಾಳಿವೇಗದಲ್ಲಿ ಹಬ್ಬಿದ ಕೊರೋನಾ ಮಹಾಮಾರಿ ಕೂಲಿಯನ್ನು ಕಿತ್ತುಕೊಂಡಿದೆ. ತಾಯಿಗೆ ಚಿಕಿತ್ಸೆ ಕೊಡಿಸಲು ಒಂದುವರೆ ಲಕ್ಷ ಸಾಲ ಮಾಡಿರುವ ಇನ್ನೂ ಏನೂ ಅರಿಯದ ಜನಾರ್ಧನ್ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನಂತೆ.
2018ರ ಆಗಸ್ಟ್ ತಿಂಗಳಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಬಡಕುಟುಂಬ ಮನೆ ಕಟ್ಟಿಕೊಡುವಂತೆ ಸೆಪ್ಟೆಂಬರ್ ತಿಂಗಳಲ್ಲಿ ತಹಶೀಲ್ದಾರ್ಗೆ ಮನವಿ ಕೊಟ್ಟಿದೆ. ಆದರೆ ಇದುವರೆಗೆ ಯಾವ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಇದುವರೆಗೆ ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದ ಕುಟುಂಬಕ್ಕೆ ಜಿಲ್ಲಾಡಳಿತ ಕನಿಷ್ಠ ಬಾಡಿಗೆ ಹಣವನ್ನು ನೀಡಿಲ್ಲ.
ಬಾಡಿಗೆ ಕಟ್ಟಲು ಹಣವಿಲ್ಲದೆ ಬಾಡಿಗೆ ಮನೆಯನ್ನು ಬಿಟ್ಟು ಬಂದು ಸದ್ಯ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದೇವೆ. ಗುಡಿಸಿಲಿನಲ್ಲಿ ಇಬ್ಬರು ಮಾತ್ರವೇ ಮಲಗಲು ಸಾಧ್ಯ. ತನ್ನ ಪತಿ ಹೊರಗೆ ಬಲುವ ಸ್ಥಿತಿ ನಮ್ಮದು ಎಂದು ಕಣ್ಣೀರಿಡುತ್ತಾರೆ ಪ್ರೇಮ.
ತಾವೇ ಮನೆ ನಿರ್ಮಿಸಿಕೊಳ್ಳಲು ಸಾಲ ಮಾಡಿ ಮನೆಯ ಅಡಿಪಾಯವನ್ನು ಹಾಕಿದ್ದಾರೆ. ಇದುವರೆಗೆ ಪರಿಹಾರವನ್ನು ನೀಡಿಲ್ಲ. ನಾವು ಬದುಕುವುದಾದರೂ ಹೇಗೆ ಎನ್ನೋದು ಅವರ ಅಳಲು.
ಒಟ್ಟಿನಲ್ಲಿ ಮನೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಕೊರೋನಾ ಮಹಾಮಾರಿ ಗಾಯದ ಮೇಲೆ ಬರೆ ಎಳೆದಿದೆ. ತೀವ್ರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಜೆಡಿಎಸ್ ಜಿಲ್ಲಾ ಘಟಕ ಒಂದು ವಾರಕ್ಕೆ ಬೇಕಾಗುವಷ್ಟು ಆಹಾರ ಧಾನ ನೀಡಿ ಸಾಂತ್ವನ ಹೇಳಿದೆ. ಇನ್ನಾದರೂ ಅಧಿಕಾರಿಗಳು ಈ ಬಡಕುಟುಂಬದತ್ತ ಗಮನಹರಿಸಿ ಸೂರು ಒದಗಿಸಿಕೊಡುತ್ತಾ ಕಾದು ನೋಡ್ಬೇಕಿದೆ.