ಬೆಂಗಳೂರು,ಮಾ.31-ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯು ಕೃಷಿ ನಿಯಂತ್ರಣ ಕೊಠಡಿ ಆರಂಭಿಸಿದ್ದು, ನಿರ್ವಹಣೆಗೆ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಿದೆ. ಕೃಷಿ ಇಲಾಖೆಯಲ್ಲಿನ ಮುಖ್ಯ ಕಚೇರಿಯಲ್ಲಿನ ನಿಯಂತ್ರಣ ಕೊಠಡಿ ಸಂಖ್ಯೆಗಳು 08022211764 ಮತ್ತು 08022212818. ಈ ಸಂಖ್ಯೆಗಳು ಇಂದು ಬೆಳಿಗ್ಗೆ 11.00 ರಿಂದ ಸಕ್ರಿಯವಾಗಿರುತ್ತವೆ.
ನಿಯಂತ್ರಣ ಕೊಠಡಿಯಲ್ಲಿ ಸ್ಮಿತಾ ಮತ್ತು ವೀಣಾ ಎಂಬುವರು ಬೆಳಗ್ಗೆ 8.00 ರಿಂದ ಮಧ್ಯಾಹ್ನ 2.00 ಗಂಟೆವರೆಗೆ ಹಾಗೂ ರೇಮಗೌಡ ಮತ್ತು ವಿಶ್ವನಾಥ್ ಎಂಬುವರು ಮಧ್ಯಾಹ್ನ 2.00 ರಿಂದ ರಾತ್ರಿ 8.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ರೈತರು ಲಾಕ್ ಡೌನ್ ಸಂದರ್ಭದಲ್ಲಿ ನಿಯಂತ್ರಣ ಕೊಠಡಿ ಸಂಪರ್ಕಿಸಬಹುದಾದಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
# ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ :
ಕೋವಿಡ್-19 ವೈರಾಣು ಹರಡುವುದನ್ನು ತಡೆಯಲು ಉನ್ನತ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್. ವಿ. ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿದೆ.ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ, ಕಾಲೇಜು- ಸಂಸ್ಥೆಗಳಲ್ಲಿ ಕೋವಿಡ್-19 ವೈರಾಣು ಹರಡುವಿಕೆಯನ್ನು ಸಮರ್ಥವಾಗಿ ತಡೆಯಲು ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ಸೂಚನೆ ನೀಡಲು ಈ ಕಾರ್ಯಪಡೆ ರಚಿಸಲಾಗಿದೆ.
ಈ ಕಾರ್ಯಪಡೆಯು ಉನ್ನತ ಶಿಕ್ಷಣ ಇಲಾಖೆಗೆ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.ಕಾರ್ಯಪಡೆಯ ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಗೋಪಾಲ ಬಿ.ಹೊಸೂರ್, ಕೆ ಅಣ್ಣಾಮಲೈ, ಐಎಎಸ್ ಅಧಿಕಾರಿಗಳಾದ ಅನಿರುದ್ಧ ಶ್ರವಣ್, ಪಿ. ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ್, ಮಾಹಿತಿ ತಂತ್ರಜ್ಞಾನ ಇಲಾಖೆ ನಿರ್ದೇಶಕ ಪ್ರಶಾಂತ್ ಮಿಶ್ರಾ, ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಕೆ.ಎಲ್.ಸುಬ್ರಹ್ಮಣ್ಯ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಎ.ಕೋರಿ ನೇಮಕವಾಗಿದ್ದಾರೆ.